ಬಿಹಾರ: ಮುಸ್ಲಿಂ ಬಾಂಧವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಬಿಹಾರ ಬಿಜೆಪಿ ಶಾಸಕ ಹರಿ ಭೂಷಣ್ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣ ಹೆಚ್ಚು” . ಅವರು ಭಾರತವನ್ನು ಇಸ್ಲಾಮ್ ಆಗಿ ಬದಲಾಯಿಸಲು ಬಯಸುತ್ತಿದ್ದಾರೆ” ಎಂದು ಕೋಮು ಸೌಹಾರ್ದತೆ ಕದಡುವಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್, ಇತ್ತೀಚೆಗೆ ವಿಧಾನಸಭೆಯಲ್ಲಿ, ರಾಜ್ಯದಲ್ಲಿ ಜನಸಂಖ್ಯೆ ಕುರಿತು ಮಾತನಾಡುವಾಗ, ಫಲವತ್ತತೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ಮಾತನಾಡಿದ ಹರಿಭೂಷಣ್ ಠಾಕೂರ್ ಈ ಹೇಳಿಕೆ ನೀಡಿದ್ದಾರೆ. ಬಿಹಾರದ ಹಿಂದೂಗಳಲ್ಲಿ ಫಲವತ್ತತೆ ಪ್ರಮಾಣ ಕಡಿಮೆಯಾಗಿದೆ, ಮುಸ್ಲಿಮರಲ್ಲಲ್ಲ ಎಂದು ಹೇಳಿರುವ ಅವರು, ಈ ಜನಸಂಖ್ಯೆ ಹೆಚ್ಚಳವನ್ನು ತಡೆಯಲು ಕಾನೂನು ತರಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರಬೇಕು. ಇಲ್ಲಿನ ಸಂಪನ್ಮೂಲಗಳು ಕಡಿಮೆಯಾಗಿವೆ. ಆದರೆ ಕೆಲವರು ಜನಸಂಖ್ಯೆ ಬೆಳೆಸುತ್ತಲೇ ಇದ್ದಾರೆ. ಇಡೀ ದೇಶವನ್ನು ಇಸ್ಲಾಮಿಕ್ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಜೆಡಿಯು ಮುಸ್ಲಿಂ ಮುಖಂಡರ ಬಗ್ಗೆಯೂ ಮಾತನಾಡಿ, “ರಾಷ್ಟ್ರ ಮೊದಲು. ಆನಂತರ ಧರ್ಮ. ಆದರೆ ಕೆಲವರಿಗೆ ಧರ್ಮ ಮೊದಲಾಗಿದೆ, ರಾಷ್ಟ್ರ ಆನಂತರದ ವಿಷಯವಾಗಿದೆ. ಅವರಲ್ಲಿ ದೇಶಾಭಿಮಾನದ ಭಾವನೆಯೇ ಇಲ್ಲವಾಗಿದೆ” ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡನ ಹೇಳಿಕೆ ಕುರಿತು ಎಐಎಂಐಎಂ ಶಾಸಕ ಅಖ್ತರ್ ಉಲ್ ಇಮಾನ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕರ ಈ ಹೇಳಿಕೆ ಅಸಾಂವಿಧಾನಕವಾದದ್ದು ಹಾಗೂ ಸಮಾಜವನ್ನು ಒಡೆಯುವಂಥದ್ದು. ಫಲವತ್ತತೆಗೂ ಧರ್ಮಕ್ಕೂ ಸಂಬಂಧವಿಲ್ಲ. ಇದು ಬಡತನ ಹಾಗೂ ಅನಕ್ಷರತೆಗೆ ಸಂಬಂಧಿಸಿದ್ದು ಎಂದು ದೂರಿದ್ದಾರೆ.