ಬೆಂಗಳೂರು: ಡೆನ್ಮಾರ್ಕ್ನ ಮಾಷ್ ಮೇಕ್ಸ್ ಕಂಪನಿಯು ಉಡುಪಿಯಲ್ಲಿ ಅಂದಾಜು 100 ಕೋಟಿ ರೂಪಾಯಿ ವೆಚ್ಚದಲ್ಲಿ ಮಣ್ಣಿನ ಫಲವತ್ತತೆ ಸುಧಾರಿಸುವ ಗೋಡಂಬಿ ಸಂಸ್ಕರಣೆಯ ತ್ಯಾಜ್ಯ ಬಳಸಿ ಸಮೃದ್ಧ ಇಂಗಾಲ ಹೊಂದಿರುವ ಬಯೋಚಾರ್ ತಯಾರಿಸುವ ಘಟಕ ಸ್ಥಾಪಿಸಲಿದೆ.
ಇದು ಭಾರತದಲ್ಲಿನ ಮೊದಲ ಅತ್ಯಾಧುನಿಕ ತಂತ್ರಜ್ಞಾನದ ಬಯೋಚಾರ್ ತಯಾರಿಕಾ ಘಟಕವಾಗಿರಲಿದ್ದು, ಸುಸ್ಥಿರ ಇಂಧನ ಪರಿಹಾರಗಳಲ್ಲಿ ಮಾಷ್ ಮೇಕ್ಸ್ ಕಂಪನಿ ಮುಂಚೂಣಿಯಲ್ಲಿದೆ.ಈ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಕೈಗಾರಿಕಾ ಇಲಾಖೆ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದ್ದಾರೆ.
ಶುದ್ಧ ಇಂಧನ, ನಾವೀನ್ಯತೆ, ಸಂಶೋಧನೆ ಮತ್ತು ಅತ್ಯಾಧುನಿಕ ತಯಾರಿಕಾ ವಲಯಗಳಲ್ಲಿ ಕರ್ನಾಟಕದ ಕೈಗಾರಿಕಾ ಸಾಮರ್ಥ್ಯ ಬಲಪಡಿಸಲು ಹಾಗೂ ವಾಣಿಜ್ಯ ಸಹಯೋಗ ವೃದ್ಧಿಸುವ ಸಂಬಂಧ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ರಾಜ್ಯದ ನಿಯೋಗ ಸ್ವೀಡನ್ ಮತ್ತು ಡೆನ್ಮಾರ್ಕ್ಗೆ ಭೇಟಿ ನೀಡಿದೆ.ಭೇಟಿ ವೇಳೆ ಎಪಿರಾಕ್, ಮಾಷ್ ಮೇಕ್ಸ್ ಮತ್ತು ಡಬ್ಲ್ಯುಎಸ್ ಆಡಿಯೊಲೊಜಿ ಕಂಪನಿಗಳ ಮುಖ್ಯಸ್ಥರ ಜೊತೆ ರಾಜ್ಯದ ನಿಯೋಗ ಸಮಾಲೋಚನೆ ನಡೆಸಿದೆ.