ಬೆಂಗಳೂರು: ನಟ ಉಪೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ. ಉಪ್ಪಿ ವಿರುದ್ಧ ದಾಖಲಾಗಿದ್ದ ಅಟ್ರಾಸಿಟಿ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.ನಟ ಉಪೇಂದ್ರ ಅವರ ಊರು ಅಂದರೆ ಅಲ್ಲಿ ಹೊಲಗೇರಿ ಇರುತ್ತೆ ಎಂಬ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೇಳಿಕೆಗೆ ಸಂಬಂಧಿಸಿದಂತೆ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿತ್ತು. ತಾವು ಹೇಳಿದಂತ ಗಾದೆ ಮಾತು ವಿವಾದಕ್ಕೆ ಕಾರಣವಾಗುತ್ತಿದ್ದಂತ ನಟ ಉಪೇಂದ್ರ ಅವರು ತಮ್ಮ ಹೇಳಿಕೆಯ ಬಗ್ಗೆ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕ್ಷಮಿಸುವ ಸೌಜನ್ಯ ತೋರುವಂತೆಯೂ ಹೇಳಿದ್ದರು.
ಇದಷ್ಟೇ ಅಲ್ಲದೇ ಅವರ ವಿರುದ್ಧ ದಾಖಲಾಗಿದ್ದಂತ ಅಟ್ರಾಸಿಟಿ ಕೇಸ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಅವರ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು, ಇದೊಂದು ಪದ ಮಾತ್ರ ಉಪಯೋಗಿಸಿದರಾ ಎಂದು ಪ್ರಶ್ನಿಸಿದರು.ಗಾದೆ ಬಳಸಿದ್ದಾರೆ ಅದಕ್ಕೇಕೆ ಇಷ್ಟೊಂದು ಎಫ್ಐಆರ್ ಎಂಬುದಾಗಿ ಕೇಳಿದರು. ಅಲ್ಲದೇ ಗಾದೆ ಮಾತು ಉಲ್ಲೇಖಿಸಿ ಮಾತನಾಡಿದ್ದಕ್ಕೆ ಎಸ್ಸಿ, ಎಸ್ಟಿ ತಡೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಬಳಿಕ ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ಗೆ ತಡೆಯನ್ನು ನೀಡಿದ್ದಾರೆ. ನಟ ಉಪೇಂದ್ರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ಅವರು ವಾದ ಮಂಡಿಸಿದರು.