ಬೆಂಗಳೂರು: ಭಗವಾನ್ ಹೆಸರಿನಲ್ಲಿ ಸಾಕಷ್ಟು ಕಿರುಚಿತ್ರಗಳು ಬಂದಿವೆ. ಇದೀಗ ಅವರ ವಿಚಾರಗಳನ್ನು ಒಳಗೊಂಡ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ಬರಲಿದೆ.
‘The endless one ಭಗವಾನ್ ಶ್ರೀ ನಿತ್ಯಾನಂದ.. ಇದು ಆರು ಭಾಷೆಗಳಲ್ಲಿ ಮೂಡಿ ಬರಲಿರುವ ಸಿನಿಮಾದ ಶೀರ್ಷಿಕೆ. ಇಂದು ಈ ಚಿತ್ರದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಆಗಿದ್ದು, ಚಿತ್ರದ ಕುರಿತು ಕುತೂಹಲ ಹುಟ್ಟಿಸಿದೆ. ಅವಧೂತ ವಿನಯ್ ಗುರೂಜಿ ಅವರು ಇಂದು ಬೆಂಗಳೂರಿನಲ್ಲಿ ಈ ಚಿತ್ರದ ಟೈಟಲ್ ಲಾಂಚ್ ಮಾಡಿ, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ಹಲವು ವಿಷಯಗಳನ್ನು ಜನರಿಗೆ ತಲುಪಿಸಲಿದೆ ಎಂದು ವಿನಯ್ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.
ಸಿನಿಮಾಗೆ The endless one ಭಗವಾನ್ ಶ್ರೀ ನಿತ್ಯಾನಂದ ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದ್ದು, ಖೋಡೇ ಕುಟುಂಬದ ಕೃಷ್ಣ ಕೆ.ಆರ್. ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗುಲಾಬ್ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು,ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯದಲ್ಲಿಯೇ ತಾರಾಗಣ ಹಾಗೂ ತಂತ್ರಜ್ಞರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಅಂದಹಾಗೆ ಈ ಚಿತ್ರಕ್ಕೂ ಬಿಡದಿಯ ನಿತ್ಯಾನಂದಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದೇ ಕಥೆ ಒಳಗೊಂಡಿದೆ.