ಶಿವಮೊಗ್ಗ: ಗ್ರಾಮ ಸಹಾಯಕಿಯೊಬ್ಬರು ಜಿಲ್ಲೆಯ ಭದ್ರಾವತಿ ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಸಂಬಳ ಕೇಳಿದರೆ ತಹಶೀಲ್ದಾರ್ ಮಂಚಕ್ಕೆ ಕರೆಯುತ್ತಾನೆ ಎಂಬ ಆರೋಪ ಕೇಳಿ ಬಂದಿದೆ.

ತಹಸೀಲ್ದಾರ್ ಎಚ್.ಸಿ. ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿಎಸ್ಎಸ್ ಮತ್ತು ಜೆಡಿಎಸ್ ಮುಖಂಡರು ಹಳೆನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಿದ್ದಾಪುರ ಗ್ರಾಮ ಲೆಕ್ಕಾಧಿಕಾರಿ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ವೇತನ ಬಿಡುಗಡೆ ಮಾಡಲು ತಹಶೀಲ್ದಾರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಹಳೆನಗರ ಠಾಣೆಗೆ ದೂರು ನೀಡಿದ್ದಾರೆ.
ಈ ವಿಷಯ ತಿಳಿದ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರವರು ತಕ್ಷಣವೇ ಭದ್ರಾವತಿ ತಹಶೀಲ್ದಾರ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಹಿಳೆಗೆ ವೇತನ ಮಾಡಿ ಕೊಟ್ಟಿಲ್ಲ ಎಂದು ಕೇಳಲು ಹೋದ ಗ್ರಾಮ ಸಹಾಯಕಿಗೆ, ಕ್ವಾಟ್ರಸ್ ಗೆ ನೀನು ಒಬ್ಬಳೇ ಬರಬೇಕು, ಬಂದು ನನಗೆ ಸಂತೋಷ ಪಡಿಸಿದರೆ ಕೆಲಸ ಮಾಡಿ ಕೊಡುವುದಾಗಿ ತಹಶೀಲ್ದಾರ ಹೇಳಿದ್ದರು. ಇದರಿಂದ ನನಗೆ ಮಾನಸಿಕವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.