ಬೆಳ್ತಂಗಡಿ: ಕಾಂಗ್ರೆಸ್ ಸರ್ಕಾರ ಮಾಡಿದಂತಹ ಭೂ ಸುಧಾರಣೆ ಕಾನೂನಿನಿಂದ ಕೃಷಿಕರು,ರೈತರು ಹಾಗೂ ಬಡವರು ಇಂದು ನೆಮ್ಮದಿಯಿಂದ ಜೀವನವನ್ನು ನಡೆಸುತ್ತಿದ್ದಾರೆ. ಈ ಕಾನೂನನ್ನು ಬದಲಾವಣೆ ಮಾಡಬೇಕು ಎಂದು ಈಗಿನ ಸರ್ಕಾರಗಳಿಗೆ ಯಾರೂ ಹೇಳಿಕೊಂಡಿಲ್ಲವಾದರೂ ಕೃಷಿ ಮಾಡದವರು, ವ್ಯಾಪಾರಸ್ಥರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸಿ ಭೂಮಿಯನ್ನು ಖರೀದಿ ಮಾಡುವ ಧೃಷ್ಟಿಯಿಂದ ಈ ಕಾನೂನನ್ನು ಬದಲಾವಣೆ ಮಾಡಲು ಸರ್ಕಾರ ಹೊರಟಿರುವುದು . ರೈತರಿಗೆ ಕೃಷಿಕರಿಗೆ ಜನಸಾಮಾನ್ಯರಿಗೆ ಮಾಡುವ ಮೋಸ ಎಂದು ಮಾಜಿ ಸಚಿವ ಗಂಗಾದರ ಗೌಡ ಆರೋಪಿಸಿದರು.
ಅವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು. ನರೇಂದ್ರ ಮೋದಿ ಕಾರ್ಪೊರೆಟ್ ಕಂಪನಿಗಳ ಏಜೆಂಟ್ ತರ ಕೆಲಸ ಮಾಡುತ್ತಿದ್ದಾರೆ ಕಾರ್ಮಿಕ ಕಾನೂನು ತಿದ್ದುಪಡಿ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಲು ಹೊರಟಿದೆ ಅದರೆ ಪ್ರತಿಪಕ್ಷದ ವಿರೋಧದಿಂದ ಅಂಗೀಕಾರವಾಗಿಲ್ಲ ಅದರೂ ಸುಗ್ರೀವಾಜ್ಙೆ ಮೂಲಕ ಜಾರಿ ಮಾಡಲು ಹೊರಟಿರುವುದು ಖಂಡನೀಯ ಎಂದು ಕಾರ್ಮಿಕ ನಾಯಕ ಬಿ. ಎಂ. ಭಟ್ ಹೇಳಿದರು
.
ಪ್ರತಿಭಟನೆ ನಂತರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಹೆದ್ದಾರಿ ಬಂದ್ ಮಾಡಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮೀಣಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ,ಜಿ ಪಂ ಸದಸ್ಯರುಗಳಾದ ಶೇಖರ್ ಕುಕ್ಕೇಡಿ, ನಮಿತ ಪೂಜಾರಿ, ಧರಣೇಂದ್ರ ಕುಮಾರ್, ತಾ ಪಂ ಸದಸ್ಯ ವಿಟಿ ಸೆಬೆಸ್ಟಿನ್, ವಕೀಲ ಮನೋಹರ್ ಇಳಂತಿಲ, ಕೇಶವ ಪಿ ಬೆಳಾಲ್, ದಯಾನಂದ ಪಿ ಬೆಳಾಲ್, ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಬೀಡಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.