ಬೆಂಗಳೂರು: ನಗರದ ಹನುಮಂತನಗರದ 55 ವರ್ಷದ ಕರೊನಾ ಸೋಂಕಿತ ವ್ಯಕ್ತಿಯೊಬ್ಬರಿಗೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದೆ ರಸ್ತೆಯಲ್ಲೇ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
ಮೃತ ವ್ಯಕ್ತಿಯ ಮನೆ ಬಾಗಿಲಿಗೇ ಇಂದು ತೆರಳಿದ ಅನಿಲ್ಕುಮಾರ್, ಮೃತನ ಪತ್ನಿಗೆ ಕೈಮುಗಿದು ”ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಪೂರೈಸದೇ ಇದ್ದುದಕ್ಕಾಗಿ ವಿಷಾದವಿದೆ. ನಮ್ಮ ಸಿಬ್ಬಂದಿಯ ಕಡೆಯಿಂದ ನಡೆದ ಅಚಾತುರ್ಯಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ಹೇಳಿದರು.
ಹನುಮಂತನಗರದ ವ್ಯಕ್ತಿಗೆ ಕರೊನಾ ಸೋಂಕು ದೃಢವಾದ ಮೇಲೆ ಆಸ್ಪತ್ರೆಗೆ ದಾಖಲಾಗುವುದಕ್ಕಾಗಿ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದರು. ಮೂರು ಗಂಟೆಯಾದರೂ ಆಂಬ್ಯುಲೆನ್ಸ್ ಬರಲಿಲ್ಲ. ನನಗೆ ಸೋಂಕು ಇದೆ ಎಂದು ಎಲ್ಲರಿಗೂ ಗೊತ್ತಾಗಿ ಬಿಡುತ್ತೆ ಎಂಬ ಭಯ ಉಂಟಾಗಿ ಮನೆಯಿಂದ ಹೊರಬಂದ ವ್ಯಕ್ತಿಗೆ ರಸ್ತೆಯಲ್ಲೇ ಹೃದಯಾಘಾತವಾಗಿದೆ. ಹೀಗಾಗಿ ಸೋಂಕಿತ ಮನೆ ಎದುರಿನ ನಡು ರಸ್ತೆಯಲ್ಲೇ ಕುಸಿದು ಪ್ರಾಣಬಿಟ್ಟಿದ್ದಾನೆ.
ವಿಪರ್ಯಾಸವೆಂದರೆ ವ್ಯಕ್ತಿಯ ಶವ ಮಧ್ಯಾಹ್ನದಿಂದ ಸಂಜೆವರೆಗೂ ನಡು ರಸ್ತೆಯಲ್ಲೇ ಇತ್ತು. ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಈ ಮಳೆಯಲ್ಲೂ ಶವ ಮಾತ್ರ ನಡು ರಸ್ತೆಯಲ್ಲೇ ಇತ್ತು. ಮನೆಯ ಮುಂದಿನ ರಸ್ತೆಯಲ್ಲೇ ಸುಮಾರು 4 ಗಂಟೆಗಳ ಕಾಲ ಶವ ಅನಾಥವಾಗಿ ಬಿದ್ದಿತ್ತು.
ಅವರ ಕುಟುಂಬದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲೇ ಅವರ ಮೃತದೇಹವನ್ನು ಇಟ್ಟು ರೋದಿಸುತ್ತಿದ್ದ ದೃಶ್ಯ ಮತ್ತು ಹಲವು ಗಂಟೆಗಳ ಕಾಲ ಮಳೆಯಲ್ಲೇ ಆ ಶವ ಅನಾಥವಾಗಿ ಬಿದ್ದಿದ್ದ ವಿಡಿಯೋ ವೈರಲ್ ಆಗಿತ್ತು. ಇಡೀ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು.
ಕೊನೆಗೆ ಸ್ಥಳೀಯರು ರಸ್ತೆಯಲ್ಲಿದ್ದ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಅಂಬುಲೆನ್ಸ್ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿತ್ತು.