ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಮಿತಿಮೀರಿ ಹರಡುತ್ತಿದೆ, ಈ ಮಧ್ಯೆ ಲಾಕ್ಡೌನ್ ಘೋಷಣೆ ಮಾಡುವ ಭೀತಿ ಕೂಡ ಜನರನ್ನು ಕಾಡುತ್ತಿದೆ, ಹೀಗಾಗಿ ಜನರು ಬೆಂಗಳೂರನ್ನು ತೊರೆದು ತಮ್ಮ ತಮ್ಮ ಊರಿಗೆ ಮರಳುತ್ತಿದ್ದಾರೆ, ಇದರ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಬೆಂಗಳೂರಿನಲ್ಲಿ ದಿನನಿತ್ಯ ಸಾವಿರದ ಗಡಿಯ ಹತ್ತಿರ ಹತ್ತಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಜನರಲ್ಲಿ ಭಯ ಆವರಿಸಿದೆ. ಇಲ್ಲೇ ಉಳಿದರೆ ಕಷ್ಟ ಅಂತಾ ಹೇಗಾದ್ರೂ ಮಾಡಿ ಊರು ಸೇರೋಣ ಅಂತಾ ಜನ ಬೆಂಗಳೂರು ಬಿಟ್ಟು ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಅಲ್ಲದೇ ಅನೇಕರು ಮನೆ ಖಾಲಿ ಮಾಡಿಕೊಂಡು, ತಮ್ಮ ಊರುಗಳತ್ತ ವಾಪಾಸ್ ತೆರಳುತ್ತಿದ್ದಾರೆ. ಟಾಟಾ ಏಸ್, ವಾಹನಗಳಲ್ಲಿ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಅಚ್ಚರಿ ಎಂದರೆ ಇನ್ನೂ ಕೆಲವರು ಬೆಂಗಲೂರಿಗೆ ಮತ್ತೆ ಬರೋದೇ ಬೇಡ ಅಂತಾ ತೀರ್ಮಾನಿಸಿದಂತೆ ಇಡೀ ಮನೆಯ ಸಾಮಾನುಗಳನ್ನು ತೆಗೆದುಕೊಂಡು ಮಹಾನಗರಿಯನ್ನು ತೊರೆಯುತ್ತಿದ್ದಾರೆ. ಆದರೆ ಹೀಗೆ ಹೋದವರು ಪ್ರಶಾಂತವಾಗಿದ್ದ ತಮ್ಮ ಊರುಗಳನ್ನು ಕೊರೊನಾ ಮಯ ಮಾಡದಿದ್ದರೆ ಸಾಕು..