ಉಡುಪಿ : ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ತಮ್ಮ ಪ್ರೀತಿಯ ನಾಯಿ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವರ ಮನೆಯ ಮುದ್ದಿನ ನಾಯಿ “ಸನ್ನಿ” ಮೃತಪಟ್ಟಿದೆ. ವಯೋ ಸಹಜ ಕಾರಣದಿಂದ ಸನ್ನಿ ಸಾವನ್ನಪ್ಪಿದ್ದು, ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಮನೆಯ ಕುಟುಂಬ ಸದಸ್ಯರು ತೀವ್ರ ದು:ಖಕ್ಕೊಳಗಾಗಿದ್ದಾರೆ. ಸನ್ನಿ ಮನೆಯ ಸದಸ್ಯರು ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು.
ಮನೆಯ ಸದಸ್ಯನಂತೆಯೇ ಇದ್ದ ಸನ್ನಿ ಸಚಿವ ಬೊಮ್ಮಾಯಿ ಅವರಿಗೆ ಅತ್ಯಂತ ಪ್ರೀತಿಪಾತ್ರವಾಗಿತ್ತು. ಸನ್ನಿ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದ್ದು ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದು ಬಸವರಾಜ ಬೊಮ್ಮಾಯಿ ಸಾಮಾಜಿಕ ಜಾಲತಾಣದಲ್ಲಿ ದು:ಖ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಖಾಸಗಿ ನಿವಾಸದಲ್ಲಿ ಸನ್ನಿ ನಿನ್ನೆ ರಾತ್ರಿ ಮೃತಪಟ್ಟಿದ್ದು, ದೊಡ್ಡಬಳ್ಳಾಪುರದಲ್ಲಿರುವ ಬೊಮ್ಮಾಯಿ ಅವರಿ ಫ್ಯಾಕ್ಟರಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.