ಕೋವಿಡ್ ಲಾಕ್ ಡೌನ್ ಕಾರಣದಿಂದ ಕೇರಳ ಮತ್ತು ಕರ್ನಾಟಕ ನಡುವೆ ಸ್ಥಗಿತಗೊಂಡಿದ್ದ ಕೆಎಸ್ ಆರ್ ಟಿಸಿ ಬಸ್ ಸಂಚಾರ ಇಂದಿನಿಂದ ಪುನರಾರಂಭಗೊಳ್ಳುತ್ತಿದೆ. ಮಂಗಳೂರು ಮತ್ತು ಪುತ್ತೂರು ಸೇರಿದಂತೆ ವಿವಿಧ ಸ್ಥಳಗಳಿಂದ ಬಸ್ ಕಾರ್ಯಾಚರಣೆ ಆರಂಭವಾಗುತ್ತಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಕೂಡಾ ಕೇರಳದ ವಿವಿಧ ಭಾಗಗಳಿಗೆ ಕೆಎಸ್ ಆರ್ ಟಿಸಿ ಬಸ್ ಓಡಾಟ ನಡೆಸಲಿದೆ. ಹೀಗಾಗಿ ಇಷ್ಟು ದಿನಗಳ ಕಾಲ ಕೇರಳ ಮತ್ತು ಕರ್ನಾಟಕ ನಡುವೆ ಓಡಾಟಕ್ಕೆ ಸಂಕಷ್ಟ ಎದುರಿಸುತ್ತಿದ್ದ ಜನರು ಇನ್ನು ಮುಂದೆ ಸುಲಭವಾಗಿ ಓಡಾಟ ನಡೆಸಬಹುದಾಗಿದೆ.
ಆದರೆ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಇತರ ಸ್ಥಳಗಳಿಗೆ ಮೊದಲಿನಂತೆ ಸುಲಭವಾಗಿ ಓಡಾಟ ಮಾಡಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಜೊತೆ ಕೆಲವು ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಕರ್ನಾಟಕ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಕೇರಳದಿಂದ ಮಂಗಳೂರು, ಪುತ್ತೂರು, ಸುಳ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿ ಅಥವಾ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರಲೇಬೇಕು. ವಿದ್ಯಾರ್ಥಿಗಳು, ಶಿಕ್ಷಣ, ವ್ಯವಹಾರ ಮತ್ತು ಇತರೆ ಕಾರಣಗಳಿಗಾಗಿ ಕರ್ನಾಟಕಕ್ಕೆ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರು 15 ದಿನಗಳಿಗೊಮ್ಮೆ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪರೀಕ್ಷಾ ವರದಿ ಹೊಂದಿರಬೇಕಾಗುತ್ತದೆ. ಅಲ್ಲದೇ, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಕೋಎಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು. ಇನ್ನು ಕೇರಳ ಬಸ್ ಸಂಚಾರ ಆರಂಭವಾಗಿರುವ ಕಾರಣ ಕೆಎಸ್ ಆರ್ ಟಿಸಿ ವೆಬ್ ಸೈಟ್ ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರ್ಗಳ ಮುಖಾಂತರ ಟಿಕೆಟ್ ಕಾಯ್ದಿರಿಸಿಕೊಳ್ಳಲು ಕೂಡಾ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ.