ಸುಳ್ಯ: ಸರಕಾರಿ ಬಸ್ಸಿನಲ್ಲಿದ್ದ ಯುವತಿಯರಿಬ್ಬರ ಜತೆಗೆ ಯುವಕನೋರ್ವ ಮಾತನಾಡಿದನೆಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸನ್ನು ತಡೆದು ಸುಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿಸಿದ ಪ್ರಕರಣ ಗುರುವಾರ ತಡರಾತ್ರಿ ನಡೆದಿದೆ.
ಬಸ್ಸಿನಲ್ಲಿದ್ದ ಯುವತಿಯರಿಗೂ ಆರೋಪಿತ ಯುವಕನಿಗೂ ಪರಸ್ಪರ ಪರಿಚಯ ಕೂಡಾ ಇರಲಿಲ್ಲ ಎನ್ನಲಾಗಿದ್ದು, ಬಳಿಕ ಪ್ರಕರಣ ಠಾಣೆಯಲ್ಲೇ ಇತ್ಯರ್ಥಗೊಂಡಿದೆ.
ಬೆಂಗಳೂರು ಮೂಲದ ಯುವತಿಯರಿಬ್ಬರು ಪುತ್ತೂರಿಗೆ ಕೆಲಸದ ನಿಮಿತ್ತ ಬಂಡಿದ್ದು,ಬಸ್ಸಿನ ಚಾಲಕನ ಬದಿಯ ಅಡ್ಡ ಸೀಟಿನಲ್ಲಿ ಕುಳಿತಿದ್ದರು. ಚಾಲಕನ ಹಿಂದಿನ ಸೀಟಿನಲ್ಲಿ ಬೆಳ್ಳಾರೆ ನಿವಾಸಿ ಮುಸ್ಲಿಮ್ ಯುವಕನೋರ್ವ ಕುಳಿತಿದ್ದು,ಪ್ರಯಾಣದ ವೇಳೆ ಯುವತಿಯರಿಬ್ಬರ ಜೊತೆಗೆ ಯುವಕ ಮಾತುಕತೆ ನಡೆಸಿ ಮೊಬೈಲ್ ಪೋನ್ ಸಂಖ್ಯೆ ಪಡೆದುಕೊಂಡು ಚಾಟಿಂಗ್ ನಡೆಸುತ್ತಿದ್ದರು ಎಂದು ಸಂಶಯ ವ್ಯಕ್ತಪಡಿಸಿ ಬಸ್ಸಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಬಜರಂಗದಳದ ಕಾರ್ಯಕರ್ತರು ಆರೋಪಿಸಿ ಬಸ್ಸಿನಲ್ಲೇ ಯುವಕನನ್ನು ತರಾಟೆಗೈದು ಆತನ ಮೊಬೈಲ್ ಪೋನ್ ಕಿತ್ತುಕೊಂಡಿದ್ದಾರೆ.
ಪುತ್ತೂರಿನಿಂದ ಕುಂಬ್ರದಲ್ಲಿ ಇಳಿಯಬೇಕಾದ ಯುವಕ ಬೆಂಗಳೂರಿಗೆ ಟಿಕೆಟ್ ಪಡೆದಿರುವ ವಿಚಾರದ ಕುರಿತು ಸಂಶಯ ವ್ಯಕ್ತಪಡಿಸಿದ್ದು, ಪುತ್ತೂರಿನ ಬಜರಂಗದಳ ಕಾರ್ಯಕರ್ತರು ಮಾಹಿತಿ ಪಡೆದು ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಲು ಆರಂಭಿಸಿದ್ದರು. ಇದರಿಂದ ಗಾಬರಿಗೊಂಡ ಯುವಕ ಬೆಂಗಳೂರು ಬದಲು ಜಾಲ್ಸೂರು ಬಳಿ ಬಸ್ಸಿನಿಂದ ಇಳಿಯಲು ಯತ್ನಿಸಿದ್ದಾನೆ. ಬಜರಂಗದಳ ಕಾರ್ಯಕರ್ತರು ಆತನನ್ನು ಇಳಿಯದಂತೆ ತಡೆದು ಸುಳ್ಯ ಪೊಲೀಸ್ ಠಾಣೆಗೆ ಬರುವಂತೆ ಒತ್ತಾಯಿಸಿದ್ದು, ವಿಚಾರ ತಿಳಿದು ಯುವಕನ ಪರವಾಗಿಯೂ ಗುಂಪೊಂದು ಜಮಾಯಿಸಿ ಮಾತಿನ ಚಕಮಕಿ ನಡೆದಿದೆಯೆನ್ನಲಾಗಿದೆ.
ತಕ್ಷಣ ಮಾಹಿತಿ ಪಡೆದ ಸುಳ್ಯ ಠಾಣೆ ಪೊಲೀಸರು ಜಾಲ್ಸೂರು ಬಳಿ ಬಂದು ಬಜರಂಗದಳ ಕಾರ್ಯಕರ್ತರ ಸಹಿತ ಬಸ್ಸನ್ನು ಠಾಣೆಗೆ ಕರೆ ತಂದಿದ್ದಾರೆ. ಠಾಣೆ ಮುಂಭಾಗದಲ್ಲಿ ಸುಮಾರು 50-60 ಮಂದಿ ಬಜರಂಗದಳ ಕಾರ್ಯಕರ್ತರು ಜಮಾಯಿಸಿ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಯುವತಿಯರ ಹಾಗೂ ಯುವಕನ ಮೊಬೈಲ್ ಫೋನ್ಗಳನ್ನು ಪೊಲೀಸರು ಪರಿಶೀಲಿಸಿದಾಗ ಬಜರಂಗದಳ ಕಾರ್ಯಕರ್ತರು ಆರೋಪಿಸಿದ ರೀತಿಯಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿಗೇ ಇತ್ಯರ್ಥಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.