ಮಂಗಳೂರು: ಕಾಸರಗೋಡಿನ ಬೆಳ ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ತಾ ಎನ್ನುವವರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ವಾಯ್ಸ್ ಮೆಸೇಜ್ನ ಮೂಲಕ ತಾನು ಸುರಕ್ಷಿತವಾಗಿರುವ ಬಗ್ಗೆ ತಿಳಿಸಿದ್ದಾರೆ.
ನಾನು ಕೆಲಸ ಮಾಡುವ ಇಟೆಲಿಯ ಸಂಸ್ಥೆಯು ನನ್ನ ಸುರಕ್ಷತೆಗಾಗಿ ಇಟಾಲಿಯನ್ ಕೌನ್ಸಲೆಂಟ್ ರೋಮ್ ನಿಂದ ಇಟಲಿಗೆ ಹೋಗಲು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ. ಸದ್ಯಕ್ಕೆ ಕಾಬೂಲ್ ಏರ್ಪೋರ್ಟ್ನಲ್ಲಿ ಗೊಂದಲ ಇರುವುದರಿಂದ ಏರ್ಪೋರ್ಟ್ ಒಳಗೆ ಪ್ರವೇಶವಿಲ್ಲ. ಆದ್ದರಿಂದ ನಮ್ಮ ಪ್ರಯಾಣವನ್ನು ಮುಂದೂಡಲಾಗಿದೆ. ಏರ್ಪೋರ್ಟ್ಗೆ ಪ್ರವೇಶ ನೀಡುವಾಗ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಭಾರತೀಯ ರಾಯಭಾರ ಕಚೇರಿಯಲ್ಲಿ ತಾನು ನೋಂದಣಿ ಮಾಡಿದ್ದು, ಅದರ ಜತೆಗೂ ಸಂಪರ್ಕದಲ್ಲಿದ್ದೇನೆೆ. ನಮ್ಮ ಸುರಕ್ಷತೆಗೆ ಅವರೆಲ್ಲರೂ ವ್ಯವಸ್ಥೆ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳು’ ಎಂಬುದಾಗಿ ಸಿಸ್ಟರ್ ಥೆರೆಸಾ ಕ್ರಾಸ್ತಾ ತನ್ನ ಆಡಿಯೋದಲ್ಲಿ ತಿಳಿಸಿದ್ದಾರೆ.
ಸಿಸ್ಟರ್ ಥೆರೆಸಾ ಕ್ರಾಸ್ತಾ ಮೂರು ವರ್ಷಗಳ ಹಿಂದೆ ಇಟಲಿ ಮೂಲದ ಎನ್ ಜಿಓ ಸಂಸ್ಥೆಯೊಂದರಲ್ಲಿ ಸಿಸ್ಟರ್ ಆಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿಗೆ ತೆರಳಿದ್ದರು. ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ನಿವಾಸಿಯಾಗಿರುವ ಥೆರೆಸಾ ಈ ಹಿಂದೆ ನೆಲ್ಯಾಡಿಯ ಕಾನ್ವೆಂಟ್ ಒಂದರಲ್ಲಿ ಸಿಸ್ಟರ್ ಆಗಿದ್ದರು. ಆನಂತರ ಜಪ್ಪು ನಲ್ಲಿರುವ ಪ್ರಶಾಂತ ನಿವಾಸ ಆಶ್ರಮದಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.