ಸುಳ್ಯ : ಕೊರೊನಾ, ಲಾಕ್ ಡೌನ್ ನಿಂದಾಗಿ ಜನ ಜೀವನ ನಡೆಸೋದಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಸುಳ್ಯ ಆಟೋ ಚಾಲಕರೊಬ್ಬರು ಇಂತಹ ಸಂಕಷ್ಟದ ಸಂದರ್ಭದಲ್ಲೂ ಬೇರೆಯವರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಹಸುವಿನ ಗರ್ಭದಿಂದ ಕರು ತೆಗೆಯುವುದು, ಗರ್ಭಿಣಿಯರು, ವಯಸ್ಸಾದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋದು ಹೀಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ.
ಅಂದ್ಹಾಗೆ ಇವರ ಹೆಸರು ಚಂದ್ರಶೇಖರ ಕಡೋಡಿ ಅಂತಾ. ದ. ಕ. ಜಿಲ್ಲೆ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಚಂದ್ರಶೇಖರ ಕಡೋಡಿ ಪ್ರಸ್ತುತ ಕೊರೋನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತಿಚೆಗೆ ಇದೇ ಗ್ರಾಮದ ಕಡ್ಲಾರು ಮನೆ ಪದ್ಮನಾಭ ಎಂಬವರ ಹಸುವು, ರಾತ್ರಿ 10.30ರಿಂದ 11.30.ವರೆಗೂ ಹೆರಿಗೆ ನೋವಿನಿಂದ ಕಷ್ಟ ಪಡುತಿತ್ತು. ಮನೆಯವರು ತಕ್ಷಣವೇ ಚಂದ್ರಶೇಖರ ಕಡೋಡಿ ಅವರಿಗೆ ತಿಳಿಸಿದ್ದರು. ಕೂಡಲೇ ಆಗಮಿಸಿದ ಅವರು ಕರುವನ್ನ ಹಸುವಿನ ಗರ್ಭದಿಂದ ಹೊರಗೆ ತೆಗೆದು ಮನೆಯವರು ನೆಮ್ಮದಿಯ ಉಸಿರು ಬಿಡುವಂತೆ ಮಾಡಿದ್ದಾರೆ.
ಹಿಂದೆ ಪಶು ವೈದ್ಯರೊಬ್ಬ ರ ಜೊತೆಗೆ ನಾಲ್ಕು ವರ್ಷಗಳ ಕಾಲ ಸಹಾಯಕರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಚಂದ್ರಶೇಖರ್, ಹಲವಾರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಭಾಗಗಳಲ್ಲಿ ಹಸುವು ಕರು ಹಾಕಲು ಆಗದೇ ತೊಂದರೆಯಲ್ಲಿ ಸಿಲುಕಿದ್ದರೆ , ಉಚಿತವಾಗಿ ಸೇವೆ ನೀಡುತ್ತಿದ್ದಾರೆ.
ಇನ್ನು ಈ ವರ್ಷ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ, ಸುಳ್ಯದ ಕೆ. ವಿ. ಜಿ. ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ, ಸಿಜೇರಿನ್ ಆಗಬೇಕು ತಕ್ಷಣವೇ ಗರ್ಭಿಣಿ ಆರೈಕೆಗೆ ಜನ ಬೇಕು ಎಂದು ವೈದ್ಯರು ಹೇಳಿದಾಗ, ಅವರ ಮನೆಯವರು ಇವರನ್ನು ಸಂಪರ್ಕಿಸಿದ್ದಾರೆ. ವಿಷಯ ತಿಳಿದ ಇವರು ತನ್ನ ಬೈಕ್ ನಲ್ಲಿ 30ಕಿಲೋಮೀಟರ್ ದೂರ ಹೋಗಿ ಅರ್ಧ ಗಂಟೆಯಲ್ಲಿ ಗರ್ಭಿಣಿ ಮಹಿಳೆಯ, ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕುಟುಂಬವೊಂದಕ್ಕೂ ನೆರವಾಗಿದ್ದಾರೆ. ಹೀಗೆ ನಿರಂತರವಾಗಿ ಬೇರೆಯವರ ಕಷ್ಟಕ್ಕೆ ಸ್ಪಂದಿಪಸುತ್ತಾ ಅವರು ತಮ್ಮನ್ನು ತಾವು ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಈ ಮಾನವೀಯ ಕಾರ್ಯಕ್ಕೆ ನಮ್ಮದೊಂದು ಸಲಾಂ.