ಸುಬ್ರಹ್ಮಣ್ಯ: ಇನ್ನೊವಾ ಕಾರಿನಲ್ಲಿ ಬಂದು ಗೋವು ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆದಿದೆ.
ಇನ್ನೊವಾ ಕಾರ್ ನಲ್ಲಿ ಗೋವನ್ನು ತುಂಬಿಸಿ ಕದ್ದೊಯ್ಯಲು ಗೋಕಳ್ಳರು ಯತ್ನಿಸಿರುವ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಸುಬ್ರಹ್ಮಣ್ಯ ದೇವಾಲಯದ ವಠಾರದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಭಾಗದಲ್ಲಿ ಬಸ್ ಸಮೀಪ ಮಲಗಿದ್ದ ಗೋವೊಂದನ್ನು ಹಿಡಿದು ಇನ್ನೋವಾ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿರುವ ಘಟನೆ ಕಳೆದ 23ರ ನಸುಕಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ.
ಮಾರ್ಚ್ 25 ರಂದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಸೆರೆಯಾಗಿರುವ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ಗೋಕಳ್ಳರು ಮಲಗಿರುವ ದನವನ್ನು ಕಂಡು ಇನ್ನೋವಾ ಕಾರನ್ನು ರಿವರ್ಸ್ ತೆಗೆದು ಗೋವಿನ ಹತ್ತಿರ ನಿಲ್ಲಿಸಿದ್ದಾರೆ. ಇಬ್ಬರು ಕಾರಿನಿಂದ ಇಳಿದಿದ್ದಾರೆ. ಮಲಗಿದ್ದ ಗೋವಿಗೆ ಏನೋ ಆಹಾರ ಹಾಕಿ ಹಿಡಿಯಲು ಶತಪ್ರಯತ್ನ ಪಟ್ಟಿದ್ದಾರೆ. ಆದರೆ ದನ ಕಟುಕರ ಕೈಯಿಂದ ತಪ್ಪಿಸಿಕೊಂಡು ಹೋಗಿದೆ.
ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕಳ್ಳರು ಯಾರೋ ಸುಬ್ರಹ್ಮಣ್ಯದ ಸ್ಥಳ ಪರಿಚಯ ಇರುವವರ ರೀತಿಯೇ ವರ್ತಿಸಿದ್ದಾರೆ. ರಾಜ್ಯದ ಅತೀ ಶ್ರೀಮಂತ ದೇವಸ್ಥಾನದಲ್ಲೇ ಈ ರೀತಿ ಗೋವು ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವುದು ಅಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಅನುಮಾನ ಮೂಡಿಸಿದೆ. ಗೋವು ಕಳ್ಳತನ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳುವಾಗ ಪೊಲೀಸ್ ತಪಾಸಣೆ ಇರುವುದಿಲ್ಲವೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿದೆ.