ಕಡಬ: ತಂದೆ ತಾಯಿಯನ್ನು ನೋಡಲು ಬಂದ ಮಹಿಳೆ ಮೇಲೆ ಚಿಕ್ಕಪ್ಪ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಮೈಯಲ್ಲಿ ಫೆ. 20ರಂದು ನಡೆದಿದೆ.
ಕಡಬ ಬೆಳಂದೂರಿನ ರಾಮಣ್ಣ ಗೌಡ ಅವರ ಪತ್ನಿ ಯಶೋದಾ ಅವರು ಬೆಳಂದೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು 20ರಂದು ಸಂಜೆ 5ರ ವೇಳೆಗೆ ಅಪ್ಪ ಅಮ್ಮನ ಆರೋಗ್ಯ ವಿಚಾರಿಸಲು ಬೆಳಂದೂರಿನ ಅಮೈಯಲ್ಲಿರುವ ತವರು ಮನೆಗೆ ಹೋಗಿದ್ದರು. ಆ ವೇಳೆ ಅಲ್ಲಿಗೆ ಬಂದ ಅವರ ಚಿಕ್ಕಪ್ಪ ಧರ್ಮಪಾಲ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಆಗ ಯಶೋದಾ ಅವರು ಯಾಕೆ ಬಯ್ಯುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಧರ್ಮಪಾಲ ಅವರು ಅವಾಚ್ಯವಾಗಿ ಬೈದು ಮರದ ಸಲಾಕೆಯಿಂದ ಯಶೋದಾ ಅವರ ಕೈಗೆ, ಬೆನ್ನಿನ ಹಿಂಬದಿಗೆ ಹೊಡೆದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ನಿಮ್ಮನ್ನು ಇಂದು ಕೊಲೆ ಮಾಡಿ ಹೋಗುತ್ತೇನೆಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಯಶೋದಾ ತಿಳಿಸಿದ್ದಾರೆ.
ಇನ್ನು ಗಾಯಗೊಂಡ ಯಶೋದಾ ಅವರನ್ನು ಮೊದಲ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಪಾಲ ಅವರು ಪ್ರತಿ ದೂರು ದಾಖಲಿಸಿದ್ದು ಅದರಂತೆ ಅವರ ಅಣ್ಣ ಸುಂದರ ಗೌಡರ ಪತ್ನಿ, ಮಗಳು ಯಶೋದಾ ಅವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.