ಉಪ್ಪಿನಂಗಡಿ: ನೀವೆಲ್ಲಾ ಆಗಾಗ್ಗೆ ಅನಾಥ ಮಕ್ಕಳಿದ್ದಾರೆ ನಮ್ಮ ಆಶ್ರಮದಲ್ಲಿ, ವೃದ್ಧರಿದ್ದಾರೆ, ಮುದುಕಿಯರಿದ್ದಾರೆ ನಿಮ್ಮಲ್ಲಿರುವ ಹಳೆ ಬಟ್ಟೆ ಕೊಡಿ ಪುಣ್ಯ ಬರುತ್ತೆ ಅಂತಾ ಮನೆ ಬಾಗಿಲಿಗೆ ಅನೇಕರು ಒಂದೊಂದು ಆಶ್ರಮದ ಹೆಸರು ಹೇಳಿಕೊಂಡು ಬರುವವರನ್ನು ನೋಡಿರ್ತೀರಿ. ಇದೇ ರೀತಿ ಉಪ್ಪಿನಂಗಡಿಯಲ್ಲಿ ಆಶ್ರಮಕ್ಕೆ ಬಟ್ಟೆ ಕೊಡಿ ಅಂತಾ ಕೇಳಿಕೊಂಡು ಬಂದವರ ನಿಜ ಬಣ್ಣ ಬಯಲಾಗಿದೆ.
ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಕೊಯಿಲ ಎಂಬವರ ಮನೆಗೆ ಸೋಮವಾರ ಇಬ್ಬರು ಹೆಂಗಸರು ತಾವು ಮೈಸೂರಿನ ಇಲವಾಲದ ಬಳಿಯಿರುವ ಅಂಗವಿಕಲ ಮತ್ತು ವೃದ್ಧಾಶ್ರಮದಿಂದ ಬಂದಿದ್ದೇವೆ. ಅಲ್ಲಿಗೆ ವಸ್ತ್ರ ಹಾಗೂ ಹಣದ ಸಹಾಯ ಮಾಡಿ ಎಂದು ಕೇಳಿದ್ದಾರೆ. ಆಗ ಅನುಮಾನ ಬಂದು ಸಂಸ್ಥೆಯ ಐಡಿ ಕಾರ್ಡ್ ತೋರಿಸುವಂತೆ ಅವರು ಕೇಳಿದ್ದಾರೆ. ಬಳಿಕ ಆಶ್ರಮದ ಅಧ್ಯಕ್ಷರು ನೆರವು ನೀಡುವಂತೆ ಮನವಿ ಮಾಡಿರುವ ಕರಪತ್ರವೊಂದನ್ನು ಅವರು ತೋರಿಸಿದ್ದಾರೆ. ಅದರಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ ಮಾತನಾಡಿದ ಆಶ್ರಮದ ಅಧ್ಯಕ್ಷ ಎಸ್. ಕೆ. ರಮೇಶ್ ಅವರು ನಾವು ಯಾರಿಗೂ ಆಶ್ರಮದ ಹೆಸರು ಹೇಳಿ ಹಣ ಹಾಗೂ ಬಟ್ಟೆ ಬರೆ ಸಂಗ್ರಹ ಮಾಡಲು ಹೇಳಿಲ್ಲ. ಆ ಮಹಿಳೆಯರು ನಮ್ಮ ಸಂಸ್ಥೆಯವರು ಅಲ್ಲ. ಆದ್ದರಿಂದ ಅವರಿಗೆ ಸಹಾಯ ಮಾಡಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೇ ಆಶ್ರಮದ ಹೆಸರಿನಲ್ಲಿರುವ ಕರಪತ್ರವನ್ನು ಅವರಿಂದ ವಶಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆ ಮಹಿಳೆಯರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರದೀಪ್, ಇವರ ತಂಡ ಉಪ್ಪಿನಂಗಡಿ ಹಳೆಗೇಟಿನ ನೇತ್ರಾವತಿ ನದಿ ಕಿನಾರೆಯಲ್ಲಿ ಬೀಡು ಬಿಟ್ಟಿದ್ದು ಅವರು ಸಂಗ್ರಹಿಸಿದ ಹಳೆಯ ಬಟ್ಟೆ ಬರೆಗಳನ್ನು ಒಗೆದು ಸಂತೆಗೆ ತೆಗೆದುಕೊಂಡು ಹೋಗಿ ಹೊಸ ಬಟ್ಟೆ ಎಂದು ಜನರನ್ನು ಮೋಸಗೊಳಿಸುತ್ತಿದ್ದಾರೆ. ಆದ್ದರಿಂದ ಜನರು ಇಂತಹವರ ಮೋಸಕ್ಕೆ ಒಳಗಾಗಬಾರದು. ಪೊಲೀಸರು ಕೂಡ ಇಂತಹ ವಂಚನೆ ಎಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಜನ ಕೂಡ ಹಿಂದೆ ಮುಂದೆ ನೋಡದೇ, ವಿಚಾರಿಸದೇ ಇಂತಹವರಿಗೆ ಸಹಾಯ ಮಾಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.