ಮುಂಬಯಿ : ತುಳು ಸಂಘ ಬೋರಿವಲಿಯ ಮಹಿಳಾ ವಿಭಾಗದ ವತಿಯಿಂದ ಬೋರಿವಲಿ (ಪ.) ವಜಿರಾನಾಕಾ ಸಮೀಪದ ರೈಲ್ ನಗರ್ ಸಭಾಗೃಹದಲ್ಲಿ ‘ಆಟಿಡ್ ಒಂಜಿ ಕೂಟ’ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಳು ಸಂಘ ಬೋರಿವಲಿ ಅಧ್ಯಕ್ಷ ಕರುಣಾಕರ ಎಂ.ಶೆಟ್ಟಿ ತುಳು ಸಂಘವು ನಾಡಿನ ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರಥಮವಾಗಿ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದರೊಂದಿಗೆ ಸಂಘದ ಅಭಿವೃದ್ದಿಯನ್ನು ಮಾಡಬೇಕಾಗಿದ್ದು ಎಲ್ಲರೂ ಸಹಕರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶೈಲಜಾ ಅಮರನಾಥ್ ಶೆಟ್ಟಿ, ಮಾತನಾಡಿ ನಾವು ಈ ಮಹಾನಗರಕ್ಕೆ ಊರಿನ ಹಲವಾರು ವಿಷಯಗಳನ್ನು ಈ ಸಂದರ್ಭದಲ್ಲಿ ನೆನಪಿಸಬೇಕಾಗಿದೆ. ಹಿಂದೆ ನಮ್ಮ ನಾಡಿನ ವಿವಿಧ ಸಮುದಾಯಗಳ ಆಗಿನ ಹಿರಿಯರ ಮೂಲ ಕಸುಬುಗಳನ್ನು ನೆನಪಿಸಿದಾಗ ಅದನ್ನು ಹಿಂದಕ್ಕೆ ತಿರುಗಿ ನೋಡಲು ಅಸಾಧ್ಯ. ಈ ಎಲ್ಲಾ ಸಂಸ್ಕೃತಿಗಳು ಇಂದು ಮಾಯವಾದಂತಿದೆ. ನಮ್ಮಮ್ಮ ತುಳು ಜಾನಪದದ ಬಗ್ಗೆ ಬಹಳಷ್ಟು ಅರಿತಿದ್ದರು. ಮನೆಯಲ್ಲಿರುವ ಹಿರಿಯರಲ್ಲಿ ಜ್ಞಾನದ ಭಂಡಾರವೇ ಇದೆ . ಅದನ್ನರಿತು ಮುಂದಿನ ಜನಾಂಗಕ್ಕೆ ತಿಳಿಸೋಣ. ನಮ್ಮ ಊರಿನ ಸಂಸ್ಕೃತಿಯನ್ನು ಇಲ್ಲಿ ಆಚರಿಸುತ್ತಿದ್ದೇವೆ, ಅದಕ್ಕೆ ತುಳು ಸಂಘ ಬೊರಿವಲಿಯ ಸದಸ್ಯರು ಅವರ ಮನೆಯಲ್ಲಿ ಮಾಡಿ ತಂದಂತಹ ಆಹಾರಗಳೇ ಸಾಕ್ಷಿಯಾಗಿದೆ ಎಂದರು.
ಗೌರವ ಅಥಿತಿಯಾಗಿ ಉಪಸ್ಥಿತರಿದ್ದ ನಗರದ ಹಿರಿಯ ತುಳು ಕನ್ನಡ ಸಾಹಿತಿ ಶೀಮಂತೂರು ಚಂದ್ರಹಾಸ ಸುವರ್ಣ ಅವರು ಆಟಿ ಮಾತನಾಡುತ್ತಾ ಆಟಿ ಆಚರಣೆಯು ಮುಂಬೈಗೆ ಬಂದ ಬಗ್ಗೆ ತಿಳಿಸಿದರು. ನಾಡಿನ ಸಂಸ್ಕೃತಿ ಭಾಷೆಯನ್ನು ಉಳಿಸಲು ಆಟಿಡೊಂಜಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ನಾಡಿನ ಸಂಸ್ಕಾರ ಸಂಸ್ಕೃತಿ ಉಳಿದಿದ್ದರೆ ಅದು ಮುಂಬೈಯಲ್ಲಿ ಮಾತ್ರ. ನಾವು ಮುಂದಿನ ಜನಾಂಗಕ್ಕೆ ನಮ್ಮ ನಾಡಿನ ಸಂಸ್ಕೃತಿಯನ್ನು ತಿಳಿಸಲು ಆಟಿಯನ್ನು ಆಚರಿಸುತ್ತಿದ್ದೇವೆ. ಇಂದು ನಾಗಾರಾಧನೆ ದೈವಾರಾಧನೆ ಯಲ್ಲಿ ಆಡಂಬರ ಕಾಣುತ್ತಿದೆ. ನಮಗೆ ಭಕ್ತಿ ಬೇಕಾಗಿದೆ. ನಮ್ಮ ಮೂಲ ಸಂಸ್ಕೃತಿಗೆ ಮಾರಕವಾಗದ ರೀತಿಯನ್ನು ನಾವು ಎಲ್ಲವನ್ನು ಆಚರಿಸೋಣ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ತಿಲೋತ್ತಮ ಪಿ. ವೈದ್ಯ ಅವರು ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸುತ್ತಾ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ಮಹಿಳಾ ವಿಭಾಗದ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಂಡಪ್ಪ ಪಯ್ಯಡೆ ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ, ತುಳು ಸಂಘ ಬೋರಿವಲಿ ಸ್ಥಾಪಕ ಅಧ್ಯಕ್ಷ ವಾಸು ಪುತ್ರನ್, ತುಳು ಸಂಘ ಬೋರಿವಲಿ ಮಾಜಿ ಅಧ್ಯಕ್ಷ, ಪ್ರಕಾಶ್ ಶೆಟ್ಟಿ ಪೇಟೆಮನೆ ಮಾತನಾಡುತ್ತಾ ಶುಭ ಹಾರೈಸಿದರು.
ಬೊರಿವಲಿ ಪಶ್ಚಿಮದ ಮಹಿಷ ಮರ್ಧಿನಿ ದೇವಸ್ಥಾನದ ಟ್ರಷ್ಟಿ ಪ್ರದೀಪ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸಂಘದ ವತಿಯಿಂದ ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆ ಹಾಗೂ ವೇದಿಕೆಯಲ್ಲಿದ್ದ ಅತಿಥಿಗಳು ಹಾಗೂ ಇತರ ಗಣ್ಯರು ಗೌರವಿಸಿದರು. ನಂತರ ಮಾತನಾಡಿದ ಅವರು ಸಂಘವು ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಮಾಜಿ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪೇಟೆಮನೆ ಇವರು ಪ್ರದೀಪ್ ಶೆಟ್ಟಿಯವರನ್ನು ಪರಿಚಯಿಸಿದರು.ಅತಿಥಿಗಳನ್ನು ಸಂಘದ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ ಮತ್ತು ಸಾಂಸ್ಕೃತಿಕ ಸಮಿತಿಯ ಉಪ ಕಾರ್ಯಾಧ್ಯಕ್ಷೆ ಕಸ್ತೂರಿ ಶೆಟ್ಟಿಯವರು ಪರಿಚಯಿಸಿದರು.
ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಎಂ. ಜಿ. ಶೆಟ್ಟಿ ನಿಟ್ಟೆ, ಮಾಜಿ ಕಾರ್ಯಾಧ್ಯಕ್ಷರಾದ ವಿಜಯ್ ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುನಿತಾ ನಿತ್ಯಾನಂದ ಹೆಗ್ಡೆ, ಮಾಜಿ ಕಾಯಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಬಿಲ್ಲವರ ಅಸೋಷಿಯೇಶನ್ ಮುಂಬಯಿ ಬೋರಿವಲಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಅಮೀನ್ ಹಾಗೂ ವಿವಿಧ ಸಂಘಟನೆಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವೇದಿಕೆಯಲ್ಲಿ ರತಿ ಶಂಕರ್ ಶೆಟ್ಟಿ, ಸಮಿತಿಯ ಉಪಾಧ್ಯಕ್ಷ ಹರೀಶ್ ಜಿ. ಮೈಂದನ್, ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ, ಜೊತೆ ಕೋಶಾಧಿಕಾರಿ ಸವಿತ ಸಿ. ಶೆಟ್ಟಿ ಮಹಿಳಾ ವಿಭಾಗದ ಜಯಂತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಲಕ್ಷ್ಮಿ ದೇವಾಡಿಗ ಜಾನಪದ ನೃತ್ಯ ಹಾಗೂ ಮಾದಿರ ನೃತ್ಯ ದಿಂದ ಎಲ್ಲರನ್ನು ರಂಜಿಸಿದರು. ರಜಿತ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ರೋಹಿಣಿ ಟಿ. ಕೋಟ್ಯಾನ್ ಅವರು ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯದರ್ಶಿ ಲಕ್ಷ್ಮೀ ದೇವಾಡಿಗ ವಂದನಾರ್ಪಣೆ ಮಾಡಿದರು.