ನವದೆಹಲಿ : ಮಾರಕ ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ವಿಮಾನ, ರೈಲು ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದೀಗ ಮೂರನೇ ಹಂತದ ಲಾಕ್ ಸಂದರ್ಭದಲ್ಲಿ ಕೆಲವೊಂದು ಸಡಿಲಿಕೆಗಳನ್ನು ಮಾಡಲಾಗಿದ್ದು ರೈಲು ಸಂಚಾರವನ್ನು ಆರಂಭಿಸಲಾಗಿದೆ.
ರೈಲು ಪ್ರಯಾಣಕ್ಕಾಗಿ ಕೆಲವೊಂದು ಪ್ರಮುಖ ಮಾರ್ಗಸೂಚಿ ರೂಪಿಸಲಾಗಿದ್ದು, ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಬೇಕಿದೆ. ಆರಂಭಿಕ ಹಂತದಲ್ಲಿ ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರೈಲುಗಳು ಸಂಚರಿಸಲಿದ್ದು, ಆರಂಭದ ಮೊದಲ ದಿನವೇ ರೈಲ್ವೆ ಇಲಾಖೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.
ಈಗ ಸಂಚಾರ ಆರಂಭಿಸಿರುವ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು, ತಮ್ಮ ಮೊಬೈಲ್ ನಲ್ಲಿ ಕೊರೊನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಆರೋಗ್ಯ ಸೇತು’ ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಪ್ರಯಾಣಿಕರು ಆಹಾರ ಮತ್ತು ಹೊದಿಕೆಯಂತ ಅಗತ್ಯ ವಸ್ತುಗಳನ್ನು ತಮ್ಮ ಜೊತೆಗೆ ತರಬೇಕೆಂದು ಸೂಚಿಸಲಾಗಿದೆ.