ಕಾಸರಗೋಡು: ಜಿಲ್ಲೆಯ ಕೆಲ ಶಾಲೆಗಳಲ್ಲಿ ಮತ್ತೆ ಕನ್ನಡೇತರ ಶಿಕ್ಷಕರ ನೇಮಕದ ಸಮಸ್ಯೆ ಉದ್ಭವಿಸಿದೆ. ಕೇರಳ ಸರ್ಕಾರವು ಕನ್ನಡ ಬಾರದ ಶಿಕ್ಷಕರನ್ನು ಗಡಿ ಭಾಗದ ಜಿಲ್ಲೆಯ ಕನ್ನಡ ಶಾಲೆಗಳಿಗೆ ನೇಮಕ ಮಾಡಿದ್ದು. ಇದಕ್ಕೆ ವಿರೋಧ ವ್ಯಕ್ತವಾಗಿದೆ.
014ರ ಶಿಕ್ಷಕರ ನೇಮಕಾತಿಗೆ ಲೋಕಸೇವಾ ಆಯೋಗವು ಸಂದರ್ಶನ ಮುಗಿಸಿ, ಎರಡನೇ ಹಂತದ ನೇಮಕಾತಿ ಮಾಡಿದೆ. ಇದರಲ್ಲಿ ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಫೆ. 28ರಂದು ಈ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಕೋಟ್ಟಯಂ ಜಿಲ್ಲೆಯವರಾದ, ಕನ್ನಡ ಗೊತ್ತಿಲ್ಲದ ಶಿಕ್ಷಕರನ್ನು ಅಂಗಡಿಮೊಗರು ಶಾಲೆಗೆ ನೇಮಕ ಮಾಡಲಾಗಿದೆ.
‘ಕಾಸರಗೋಡಿಗೆ ಸಂವಿಧಾನಬದ್ಧ ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ಇರುವುದರಿಂದ, ಕನ್ನಡ ತಿಳಿದಿರುವ ಶಿಕ್ಷಕರನ್ನೇ ನೇಮಕ ಮಾಡಬೇಕೆಂದು 2016ರಲ್ಲಿ ಕೇರಳ ಹೈಕೋರ್ಟ್ ಆದೇಶಿಸಿದೆ. ಕಳೆದ ಬಾರಿಯ ನೇಮಕದ ಬಗ್ಗೆ ಸಲ್ಲಿಸಿದ ಮೂರು ಅರ್ಜಿಗಳು ಇನ್ನೂ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ. ಈ ಸಂದರ್ಭದಲ್ಲಿ ಗಡಿನಾಡಲ್ಲಿ ಕನ್ನಡ ಬಾರದವರನ್ನು ನೇಮಕ ಮಾಡಲಾಗುತ್ತಿದ್ದು, ಇದನ್ನು ಹೋರಾಟ ಮೂಲಕ ಎದುರಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ. ಭಟ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ: ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ಹೈಸ್ಕೂಲ್ನ ಭೌತವಿಜ್ಞಾನ ಶಿಕ್ಷಕರ ಹುದ್ದೆಗೆ ಮಲೆಯಾಳಿ ಶಿಕ್ಷಕರ ನೇಮಕಾತಿ ಮಾಡಿರುವುದನ್ನು ವಿರೋಧಿಸಿ, ಶಾಲೆಯ ಪೋಷಕರು ಹಾಗೂ ಸ್ಥಳೀಯರು ಸೋಮವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಕೊಟ್ಟೂಡಲ್, ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ ಎಸ್. ರೈ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಲಾಯಿತು. ಶಿಕ್ಷಣ ಇಲಾಖೆ ಕೂಡಲೇ ಈ ನೇಮಕಾತಿ ಹಿಂಪಡೆದು, ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಕ ಮಾಡಬೇಕು ಎಂದು ಆಗ್ರಹಿಸಲಾಯಿತು