ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದೀಗ ಆರ್ಜೆಡಿಯ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಜತೆ ಮುನಿಸಿಕೊಂಡು ದೂರವಾಗಿರುವ ಪತ್ನಿ ಐಶ್ವರ್ಯ ರಾಯ್ ಗಂಡನ ವಿರುದ್ಧವೇ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಇತ್ತೀಚೆಗಷ್ಟೇ ಐಶ್ವರ್ಯ ತಂದೆ ಚಂದ್ರಿಕಾ ರಾಯ್ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮಗಳು ತೇಜ್ ಪ್ರತಾಪ್ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ನಿರ್ಧಾರ ತೆಗೆದುಕೊಳ್ಳಲು ಐಶ್ವರ್ಯಾ ಮುಕ್ತವಾಗಿದ್ದು, ಸದಾ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಶೀಘ್ರದಲ್ಲಿಯೇ ಐಶ್ವರ್ಯ ತಮ್ಮ ಮುಂದಿನ ರಾಜಕೀಯ ನಡೆಗಳನ್ನು ತಿಳಿಸಲು ಸುದ್ದಿಗೋಷ್ಠಿ ಕರೆಯುತ್ತಾರೆ ಎಂದು ಚಂದ್ರಿಕಾ ರಾಯ್ ಹೇಳಿದ್ದಾರೆ.
ಐಶ್ವರ್ಯ 2018ರಲ್ಲಿ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ನ ಜತೆ ವಿವಾಹವಾಗಿತ್ತು. ಆದರೆ ಐದು ತಿಂಗಳ ನಂತರ ಲಾಲು ಪುತ್ರ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಈ ಘಟನೆ ನಂತರ ಎರಡು ಕುಟುಂಬಗಳ ನಡುವಿನ ಸಂಬಂಧ ಹದಗೆಟ್ಟಿರುವುದಾಗಿ ವರದಿ ತಿಳಿಸಿದೆ. ಈ ಜಿದ್ದಾಜಿದ್ದಿಯಿಂದಾಗಿ ಐಶ್ವರ್ಯ ತಂದೆ ಚಂದ್ರಿಕಾ ರಾಯ್ ಅವರು ಆರ್ ಜೆಡಿ ತೊರೆದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.