ಮಡಿಕೇರಿ: ವೃದ್ಧೆಯೊಬ್ಬರ ಅಂತ್ಯಸಂಸ್ಕಾರವಾಗಿ 2 ವಾರದ ಬಳಿಕ ಆಸ್ಪತ್ರೆಯಿಂದ ಮಗನಿಗೆ ನಿಮ್ಮ ತಾಯಿ ಸ್ಥಿತಿ ಗಂಭೀರವಾಗಿದೆ ಎಂಬ ಕರೆ ಬಂದ ವಿಚಿತ್ರ ಘಟನೆ ವಿರಾಜಪೇಟೆ ತಾಲೂಕಿನ ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವಕಿ (75) ಎಂಬ ವೃದ್ಧೆ ಕೊವಿಡ್ನಿಂದ ಮೃತಪಟ್ಟು ಅದಾಗಲೇ ಎರಡು ವಾರವಾಗಿದೆ. ಇದರ ನಡುವೆಯೇ ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ದೇವಕ್ಕಿ ಪುತ್ರ ಪೊನ್ನಪ್ಪನಿಗೆ ಕರೆ ಬಂದಿದೆ. ʻನಿಮ್ಮ ತಾಯಿ ವೆಂಟಿಲೇಟರ್ನಲ್ಲಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದಾರೆʼ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಪೊನ್ನಪ್ಪನಿಗೆ ಒಂದು ಕ್ಷಣ ಅಚ್ಚರಿಯಾಗಿದೆ.
ಎಲ್ಲೋ ತಪ್ಪಾಗಿ ಕರೆ ಬಂದಿರಬಹುದು ಎಂದು ಪೊನ್ನಪ್ಪ ಸುಮ್ಮನಾಗಿದ್ದರು. ಆದರೆ, ಒಂದು ವಾರದ ಬಳಿಕ ಮಡಿಕೇರಿ ಕೊವಿಡ್ ಆಸ್ಪತ್ರೆಯ ಐಸಿಯುನಿಂದ ವೈದ್ಯರೊಬ್ಬರು ಕರೆ ಮಾಡಿ, ʻದೇವಕ್ಕಿ ಕಡೆಯವರಾʼ? ಅಂತ ಕೇಳಿದ್ದಾರೆ. ಆಗ ಹೌದು ಎಂದಿದ್ದಾರೆ. ಅದಕ್ಕೆ ಆ ವೈದ್ಯರು, ʻದೇವಕ್ಕಿಯವರು ಇನ್ನೂ ವೆಂಟಿಲೇಟರ್ನಲ್ಲೇ ಇದ್ದಾರೆ. ನಿಮಗೆ ಗೊತ್ತಿಲ್ವಾʼ ಅಂತ ಕೇಳಿದ್ದಾರೆ. ಸಿಟ್ಟಿಗೆದ್ದ ಪೊನ್ನಪ್ಪ ವೈದ್ಯರನ್ನು ಚೆನ್ನಾಗಿ ದಬಾಯಿಸಿದ್ದಾರೆ.
ಈ ಪ್ರಕರಣ ಈಗ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಪೊನ್ನಪ್ಪ ಅವರು ತಂದು ಅಂತ್ಯಸಂಸ್ಕಾರ ಮಾಡಿದ್ದು ನಿಜವಾಗಿಯೂ ಅವರ ತಾಯಿ ದೇವಕ್ಕಿ ಅವರ ದೇಹವೋ ಅಥವಾ ಬೇರೆಯವರ ದೇಹವೋ ಗೊಂದಲ ಮೂಡಿದೆ. ಆದರೆ ಇದನ್ನು ಪೊನ್ನಪ್ಪ ಅವರು ಒಪ್ಪಿಕೊಳ್ಳುತ್ತಿಲ್ಲ. ತಾಯಿಯ ದೇಹವನ್ನೇ ತಂದು ಸಂಸ್ಕಾರ ಮಾಡಿದ್ದೇನೆ. ಆಸ್ಪತ್ರೆಯಲ್ಲೇ ತಾಯಿಯ ಮುಖ ಚಹರೆ ನೋಡಿದ್ದೇನೆ ಅಂತ ಅವರು ಹೇಳುತ್ತಿದ್ದಾರೆ.