ಬೆಳ್ತಂಗಡಿ : ಎರಡು ವರ್ಷದ ಹೆಣ್ಣು ಮಗು ಧೃತ್ವಿ(2) ನಾಪತ್ತೆ ಪ್ರಕರಣ ಸಂಬಂಧ ಮನೆ ಪಕ್ಕದ ನದಿಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ಹಾಗೂ ಸ್ಥಳೀಯರು ಇಂದು ಸಂಜೆ 7:30 ವರೆಗೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ರಾತ್ರಿಯಾದ ಕಾರಣ ಇಂದಿಗೆ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ನಾಳೆ ಮತ್ತೆ ಹುಡುಕಾಟ ಮುಂದುವರೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಸುಲ್ಕೇರಿಯ ಜಂತಿಗೋಳಿಯ ಪರಾರಿ ಮನೆಯ ಸುಭಾಷ್ ಮತ್ತು ಸುಚಿತ್ರಾ ದಂಪತಿಯ ಪುತ್ರಿ 2 ವರ್ಷದ ಧೃತ್ವಿಯನ್ನು ಇಂದು ಮಧ್ಯಾಹ್ನ ಸುಚಿತ್ರಾ ಮತ್ತು ಅವರ ತಾಯಿ ತೋಟಕ್ಕೆ ಹೋಗುವಾಗ ಮನೆಯಲ್ಲಿ ಅಜ್ಜನ ಜೊತೆ ಬಿಟ್ಟು ಹೋಗಿದ್ದರು. ಧೃತ್ವಿ ಮನೆಯಲ್ಲಿ ಆಟವಾಡುತ್ತಿದ್ದಳು. ಆದರೆ ತಾಯಿ ಸುಚಿತ್ರಾ ಮನೆಗೆ ಬಂದಾಗ ಮಗಳು ನಾಪತ್ತೆಯಾಗಿದ್ದಳು. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಸಿಗದಿದ್ದಾಗ ಸಂಜೆ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ನದಿಯಲ್ಲಿ ನೀರಿನ ಹರಿಯು ಜಾಸ್ತಿಯಾಗಿ ಸುಳಿಗಳು ಇದ್ದಿದ್ದರಿಂದ ಹುಡುಕಾಟಕ್ಕೆ ಸಮಸ್ಯೆಯಾಗಿದೆ ಅದಲ್ಲದೆ ರಾತ್ರಿಯಾಗಿದ್ದರಿಂದ ಬೆಳಕಿನ ಸಮಸ್ಯೆಯಿಂದಾಗಿ ಹುಡುಕಾಟ ಸ್ಥಗಿತಗೊಳಿಸಿದ್ದಾರೆ. ನಾಳೆ ಬೆಳಗ್ಗೆ ಹುಡುಕಾಟ ಮುಂದುವರೆಯಲಿದೆ.
ಭಾನುವಾರವಷ್ಟೇ ಬರ್ತಡೇ ಆಚರಿಸಿಕೊಂಡಿದ್ದ ಕಂದಮ್ಮ:
ಧೃತ್ವಿಗೆ ಭಾನುವಾರವಷ್ಟೇ ಎರಡು ವರ್ಷ ತುಂಬಿತ್ತು. ಹುಟ್ಟುಹಬ್ಬ ಕೂಡ ಆಚರಿಸಿದ್ದರು. ಇದೀಗ ಎರಡು ವರ್ಷ ಎರಡು ದಿನ ಆದಾಗ ಮಗು ನಾಪತ್ತೆಯಾಗಿ ಮನೆ ಮಂದಿಯನ್ನು ಆತಂಕಕ್ಕೆ ದೂಡಿದೆ. ಮಗು ಸುರಕ್ಷಿತವಾಗಿ ಬರಲಿ ಎಂಬುವುದು ಎಲ್ಲರ ಪ್ರಾರ್ಥನೆ.