ಪುತ್ತೂರು: 36 ವರ್ಷಗಳಿಂದ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ನಿವಾಸಿ ಬಾಬು ಪೂಜಾರಿ 1985 ರಲ್ಲಿ ಆತನಿಗೆ 20 ವರ್ಷವಿದ್ದಾಗ ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ. ಬಳಿಕ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಆತನ ಬಗ್ಗೆ ಪೊಲೀ ಸರಿಗೆ ಸುಳಿವು ಲಭಿಸಿತ್ತು. ಶಿವಮೊಗ್ಗದಲ್ಲಿ 5 ವರ್ಷಗಳ ಕಾಲ ಆಟೋ ಚಾಲಕನಾಗಿದ್ದ ಆತ ಬಳಿಕ ಮಂಗಳೂರಿಗೆ ಬಂದಿದ್ದ.
ಅಲ್ಲದೇ ಮಂಗಳೂರಿನ ತಣ್ಣೀರು ಬಾವಿ ಎಂಬಲ್ಲಿಗೆ ಬಂದು ಅನ್ಯಕೋಮಿನ ಹುಡುಗಿಯನ್ನು ಮದುವೆಯಾಗಿ ತನ್ನ ಹೆಸರನ್ನು ರೆಹಮತ್ ಖಾನ್ , ತಂದೆಯ ಹೆಸರು ಅಮ್ಮು ಸಾಹೇಬ್ ಎಂಬುದಾಗಿ ಬದಲಾಯಿಸಿಕೊಂಡು ತಣ್ಣೀರಿ ಬಾವಿಯಲ್ಲಿ ವಾಸವಾಗಿದ್ದ. ಸುಮಾರು 29 ವರ್ಷಗಳ ಕಾಲ ತಣ್ಣೀರು ಬಾವಿಯಲ್ಲಿ ಕಪ್ಪು ಚಿಪ್ಪು ( ಸೆಲ್ಫಿಸ್ ) ವ್ಯಾಪಾರ ಮಾಡಿಕೊಂಡಿದ್ದು, ನಂತರ ಸುಮಾರು 3 ವರ್ಷಗಳಿಂದ ಓಶಿಯನ್ ಕಂಪೆನಿಯಲ್ಲಿ ಕನ್ಸ್ಟ್ರಕ್ಷನ್ ಕೆಲಸವನ್ನು ಮುಂಡಗೋಡಿ, ಹುಬ್ಬಳ್ಳಿ, ಬೆಳಗಾಂ ಮುಂತಾದ ಕಡೆ ಮಾಡಿಕೊಂಡಿದ್ದ.
ಸುಮಾರು ಒಂದು ವಾರದ ಹಿಂದೆ ತನ್ನ ಮಂಗಳೂರಿನ ನಿವಾಸಕ್ಕೆ ಆತ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ಅದರಂತೆ ಇಂದು ಪುತ್ತೂರು ನಗರ ಠಾಣೆಯ ಪೊಲೀಸರು ಆತನನ್ನು ಇಂದು ಬಂಧಿಸಿದ್ದಾರೆ.


