ಚೆನ್ನೈ: ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೆಲುಗು ಚಿತ್ರರಂಗದ ವಿಮರ್ಶಕ, ನಟ ಮತ್ತು ನಿರ್ಮಾಪಕರಾಗಿದ್ದ ಕತ್ತಿ ಮಹೇಶ್ ಇಂದು (ಜುಲೈ 10) ನಿಧನರಾಗಿದ್ದಾರೆ.
ಮಹೇಶ್ ಅವ್ರು ಜೂನ್ 25 ರಂದು ನೆಲ್ಲೂರು ಜಿಲ್ಲೆಯ ಕೊಡವಾಲುರ್ ಮಂಡಲದ ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ರು. ಅಂದಿನಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ, ಕೋಮಾಗೆ ಜಾರಿದ್ರು. ಚೆನ್ನೈ ಆಸ್ಪತ್ರೆಯಲ್ಲಿ ಕತ್ತಿ ಮಹೇಶ್ಗೆ ಪ್ಲಾಸ್ಟಿಕ್ ಸರ್ಜರಿ, ಮೆದುಳು ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿತ್ತು. ಕತ್ತಿ ಮಹೇಶ್ ಚಿಕಿತ್ಸೆಗಾಗಿ ಆಂಧ್ರಪ್ರದೇಶ ಸರ್ಕಾರ ಹದಿನೇಳು ಲಕ್ಷ ಹಣ ನೀಡಿತ್ತು. ಆದರೆ ಇಂದು ಸಂಜೆ ಇವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಇನ್ನು ನಟನ ಕುಟುಂಬ ಸದಸ್ಯರು ಮೃತ ದೇಹವನ್ನ ಸಂಗ್ರಹಿಸಲು ಚೆನ್ನೈಗೆ ತೆರಳಿದ್ದಾರೆ.
ಸಿನಿಮಾ ವಿಮರ್ಶಕರಾಗಿದ್ದ ಮಹೇಶ್ ಕತ್ತಿ, 2011 ರಲ್ಲಿ ಎಡಾರಿ ವರ್ಷಂ ಸಿನಿಮಾ ಮೂಲಕ ಅಭಿನಯ ಆರಂಭಿಸಿದರು. ನಂತರ 2014 ‘ಮಿನುಗುರುಲು’ ಸಿನಿಮಾಕ್ಕೆ ಚಿತ್ರಕತೆ ಬರೆದರು. ಆ ನಂತರ ಹಲವು ಸಿನಿಮಾಗಳಲ್ಲಿ ಮಹೇಶ್ ಕತ್ತಿ ನಟಿಸಿದ್ದಾರೆ. ತೆಲುಗು ಬಿಗ್ಬಾಸ್ ಮೊದಲ ಸೀಸನ್ನಲ್ಲಿ ಸ್ಪರ್ಧಿಯೂ ಆಗಿದ್ದರು ಮಹೇಶ್. ಆ ಸೀಸನ್ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ‘ಮಾರ್ನಿಂಗ್ ರಾಗಾ’ ಹೆಸರಿನಲ್ಲಿ ಮನೊರಂಜನೆ ಮಾಡುತ್ತಿದ್ದ ಮಹೇಶ್. ಟಿವಿ ಚರ್ಚೆಗಳಲ್ಲಿ ಪಾಲ್ಗೊಂಡು ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಗಳೀಗೂ ಈಡಾಗಿದ್ದರು.