ಕೊಲ್ಲೂರು: ಟಿಪ್ಪರ್ ಹಾಗೂ ಪಿಕಪ್ ಮಧ್ಯೆ ಅಪಘಾತ ಸಂಭವಿಸಿ ಪಿಕಪ್ ನಲ್ಲಿದ್ದ ಓರ್ವ ಸಾವನ್ನಪ್ಪಿರುವ ಘಟನೆ ಕೊಲ್ಲೂರು ಗ್ರಾಮದ ರಾ.ಹೆ.766(ಸಿ)ಯಲ್ಲಿ ಮಾಸ್ತಿಕಟ್ಟೆ ಸಮೀಪ ನಡೆದಿದೆ.
ಅತೀ ವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿಕೊಂಡು ಬಂದ ಅದರ ಚಾಲಕ, ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿಕಪ್ ನಲ್ಲಿದ್ದ ಒಬ್ಬರು ಮೃತ ಪಟ್ಟಿದ್ದಾರೆ. ಮೃತರನ್ನು ರಾಜುಗೌಡ ಎಂದು ಗುರುತಿಸಲಾಗಿದೆ.
ಪಿಕಪ್ ವಾಹನ ಹಾಲ್ಕಲ್ ಕಡೆಯಿಂದ ಕೊಲ್ಲೂರಿನತ್ತ ಸಾಗುತಿದ್ದರೆ, ಎದುರಿನಿಂದ ಬಂದ ಟಿಪ್ಪರ್ ರಸ್ತೆಯ ತೀರಾ ಬಲಬದಿಗೆ ಬಂದು ಢಿಕ್ಕಿ ಹೊಡೆದಿತ್ತು. ಪರಿಣಾಮ ಪಿಕಪ್ ನಲ್ಲಿದ್ದ ಚಾಲಕ ಶಿವರಾಜ ಹಾಗೂ ರಾಜುಗೌಡ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಇಬ್ಬರನ್ನು ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ರಾಜುಗೌಡ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗಾಯಾಳು ಶಿವರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.