ಬೆಂಗಳೂರು: ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಸುಧಾ ಅವರ ಆಸ್ತಿಪಾಸ್ತಿ ನೋಡಿ ಶಾಕ್ ಆಗಿದ್ದಾರೆ. ಇನ್ನು ಅವರ ಮನೆಯಲ್ಲಿರುವ ಲಾಕರ್ ತೆರೆಯಲು ಹರಸಾಹಸ ಪಡುತ್ತಿದ್ದು, ಲಾಕರ್ ಕೀಗಳನ್ನು ಕಮೋಡ್ ನಲ್ಲಿ ಬಿಸಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಎಸಿಬಿ ಅಧಿಕಾರಿಗಳು ಬಂದ 20 ನಿಮಿಷ ಬಾಗಿಲು ತೆರಯದೇ ಇದ್ದ ಸುಧಾ, ರಂಪಾಟ ಮಾಡಿದ್ದರು. ಸ್ಥಳೀಯ ಪೊಲೀಸರನ್ನು ಕರೆಸುತ್ತೇವೆ, ಈ ವೇಳೆ ನಿಮಗೆ ಅವಮಾನ ಆಗುತ್ತೆ. ಆಗ ಇನ್ನೂ ದೊಡ್ಡ ಕಷ್ಟ ಎದುರಾಗುತ್ತೆ ಎಂದು ಅಧಿಕಾರಿಗಳು ಹೇಳಿದ ಬಳಿಕ ಸುಧಾ ಬಾಗಿಲು ತೆರೆದರು. ಇದಕ್ಕೂ ಮೊದಲು ಕೆಲವೊಂದು ಕೀ ಗಳನ್ನು ಕಮೋಡ್ ಅಲ್ಲಿ ಬಿಸಾಕಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಕೊಡಿಗೇಹಳ್ಳಿಯ ಡಾ, ಸುಧಾ ನಿವಾಸಕ್ಕೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಶಾಕ್ ಆಗಿದೆ. ಸುಧಾ ಮನೆಯಲ್ಲಿ ಕೆ.ಜಿಗಟ್ಟಲೆ ಚಿನ್ನ ಹಾಗೂ ನಗದು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಪತ್ತೆಯಾಗಿರುವ ಚಿನ್ನಾಭರಣ ಎಷ್ಟು ಪ್ರಮಾಣದಲ್ಲಿದೆ ಎಂದು ಅಂದಾಜಿಸುವ ಸಲುವಾಗಿ ಅಕ್ಕಸಾಲಿಗರು ಸುಧಾ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುವುದನ್ನು ಮುಂದುವರಿಸಿದ್ದಾರೆ.