ಉಡುಪಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಹಿಂದೂಗಳಿಗೆ ಮಲ್ಪೆ ಕಡಲ ತೀರದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಸದ್ಗತಿ ಕ್ರಿಯೆಯನ್ನ ನೆರವೇರಿಸಿದರು.
ಸ್ಥಳೀಯ 25 ಯುವಕರ ತಂಡವು ಅಭಿನವ ಭಾರತ ಸೊಸೈಟಿ ಸಂಘಟನೆಯಡಿ ದಾಳಿಯಿಂದ ಮಡಿದವರಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ಕಾರ್ಯವು ಬ್ರಹ್ಮಶ್ರೀ ವೇ| ಮೂ| ವಿ| ಸೂರಾಲು ದೇವಿಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ನಡೆದಿದ್ದು, ಗೀತಾ ತ್ರಿಷ್ಟಪ್ ಹೋಮ, ತರ್ಪಣ, ಸಾಮೂಹಿಕ ಮಂತ್ರಪಠನದೊಂದಿಗೆ ಮಲ್ಪೆಯ ಹನೂಮಾನ್ ವಿಠೊಭ ರುಕುಮಾಯಿ ಭಜನಾ ಮಂದಿರದ ಮುಂಭಾಗ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಆಯೋಜಿಸಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು, ‘ಹಿಂದೂ ಸಮಾಜ ಜಾತಿ ವ್ಯವಸ್ಥೆಯಲ್ಲಿ ಹಂಚಿ ಹೋಗಿ ದುರ್ಬಲವಾಗಿದ್ದು, ಇಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಹೆದರಿ ಬದುಕುವಂತಾಗಿದೆ. ಮೊದಲು ನಮ್ಮಲ್ಲಿ ನಾವೆಲ್ಲ ಒಂದು ಕುಟುಂಬ ಎನ್ನುವ ಭಾವನೆ ಇರಬೇಕು. ಇಂತಹ ಭಾವನೆಗಳು ಎಲ್ಲರಲ್ಲಿ ಮೂಡಬೇಕು ಎನ್ನುವ ಉದ್ದೇಶದಿಂದ ಧಾರ್ಮಿಕ ವಿಧಿ ವಿಧಾನ ನಡೆಸಲಾಗಿದೆ,’ ಎಂದರು.