ಪಡುಬಿದ್ರಿ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಬುಧವಾರ ಅಪಘಾತ ಸಂಭವಿಸಿದ್ದು, ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಗಂಭೀರ ಗಾಯಗೊಂಡಿದ್ದ ಮಗ ಸಮರ್ಥ್ (13) ಮರುದಿನ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ. ರಸ್ತೆ ಬದಿಯಲ್ಲಿ ನಿಂತಿದ್ದ ಅಪ್ಪ ಮಗನ ಮೇಲೆ ಗೂಡ್ಸ್ ಲಾರಿ ಹರಿದಿದ್ದು ಇಬ್ಬರ ಜೀವ ಬಲಿ ಪಡೆದುಕೊಂಡಿತ್ತು. ಇದೀಗ ಈ ಪ್ರಕರಣ ಸಂಬಂಧ ಆತಂಕಕಾರಿ ವಿಷಯವೊಂದು ಸುದ್ದಿ ಬೆಳಕಿಗೆ ಬಂದಿದೆ.
ತಂದೆ ಮಗನಿಗೆ ಢಿಕ್ಕಿ ಹೊಡೆದು ಅವರ ಸಾವಿಗೆ ಕಾರಣವಾಗಿದ್ದ ಗೂಡ್ಸ್ ಲಾರಿ ಚಲಾಯಿಸುತ್ತಿದ್ದುದು 16 ರ ಬಾಲಕ ಎಂಬುದು. ಪೊಲೀಸರು ಸಿಸಿ ಟಿವಿ ಫೂಟೇಜ್ಗಳನ್ನು ಆಧರಿಸಿ ಬೆನ್ನತ್ತಿ ಹೋಗಿ ಲಾರಿಯ ಚಾಲಕ, ಆರೋಪಿ ಶೇಖರ್ನನ್ನು ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಲಾರಿಯನ್ನು 16 ವರ್ಷದ ಬಾಲಕ ರಾತ್ರಿಯಿಡೀ ಚಲಾಯಿಸಿಕೊಂಡು ಬಂದಿದ್ದ ಅಘಾತಕಾರಿ ಮಾಹಿತಿ ಹೊರಬಿದ್ದಿದೆ. ಆತ ಲಾರಿಯ ಕ್ಲೀನರ್ ಬಾಯ್ ಆಗಿದ್ದ. ಈ ಬಾಲಕ ಹಿಂದೆಯೂ ಲಾರಿ ಚಲಾಯಿಸಿದ ಉದಾಹರಣೆಗಳಿವೆ ಎಂಬ ಅಂಶ ಬಯಲಾಗಿದೆ.
ಉಚ್ಚಿಲದಲ್ಲಿ ಘಟನೆ ನಡೆದಿದ್ದ 20 ನಿಮಿಷದ ಮೊದಲು ಬಾಲಕ ತನಗೆ ನಿದ್ದೆ ಬರುತ್ತಿರುವುದಾಗಿ ಚಾಲಕ ಶೇಖರ್ನಿಗೆ ತಿಳಿಸಿದ್ದ. ಆದರೆ ಮುಂದೆ ಚಹಾದ ಅಂಗಡಿ ಇದೆ. ಅಲ್ಲಿಂದ ಮುಂದೆ ತಾನು ಲಾರಿ ಚಲಾಯಿಸುವುದಾಗಿ ಶೇಖರ್ ಹೇಳಿದ್ದರಿಂದ ಬಾಲಕನೇ ಲಾರಿಯನ್ನು ಉಚ್ಚಿಲದಿಂದ ಮುಂದಕ್ಕೂ ಚಲಾಯಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಟ್ಟಾರೆ ಘಟನೆಯಲ್ಲಿ ಇಬ್ಬರ ಜೀವ ಬಲಿಯಾಗಿದ್ದು ನಿಜಕ್ಕೂ ದುರಂತ.