ಮಂಗಳೂರು: ಹಿಜಾಬ್ ಇಲ್ಲದೇ ಕಾಲೇಜು ಮೆಟ್ಟಿಲೇರಲ್ಲ ಎಂದಿದ್ದ ಮಂಗಳೂರಿನ ಹಿಜಾಬ್ ಧಾರಿಣಿಯರು ಇದೀಗ ಉಲ್ಟಾ ಹೊಡೆದಿದ್ದಾರೆ. ಕಾಲೇಜಿನ ವಿರುದ್ಧವೇ ಹೋರಾಟಕ್ಕೆ ಇಳಿದಿದ್ದ 15 ಮಂದಿ ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ಪ್ರಾಂಶುಪಾಲರ ಬಳಿ ಕ್ಷಮೆಯಾಚಿಸಿ ಕಾಲೇಜಿನ ನಿಯಮವನ್ನು ಅನುಸರಿಸಿ ಕಾಲೇಜಿಗೆ ಬರಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾಳೆ.
ಇತ್ತೀಚೆಗೆ ಮಂಗಳೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೂವರು ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ಧಾರ್ಮಿಕ ಕಟ್ಟುಪಾಡುಗಳನ್ನು ಕಾಲೇಜಿನ ಒಳಗೆ ಅನುಸರಿಸದೇ, ಕಾಲೇಜಿನ ನಿಯಮಗಳನ್ನು ಪಾಲಿಸಿ ತರಗತಿಗೆ ಬರುವುದಾಗಿ ಪ್ರಾಂಶುಪಾಲರ ಬಳಿ ತನ್ನ ಹೆತ್ತವರ ಸಮ್ಮುಖದಲ್ಲಿ ಕ್ಷಮೆಯಾಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಮತ್ತೆ ಕಾಲೇಜಿನಲ್ಲಿ ಮುಂದುವರಿಯಲು ಪ್ರಾಂಶುಪಾಲರು ಅನುಮತಿಯನ್ನು ನೀಡಿದ್ದಾರೆ.
ಒಟ್ಟು 15 ಮಂದಿ ಹಿಜಾಬ್ಗಾಗಿ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿವಿ ಕಾಲೇಜನ್ನು ತೊರೆದು ಬೇರೆ ಕಾಲೇಜಿಗೆ ವರ್ಗಾವಣೆಯಾಗಲು ಕಾಲೇಜಿನಿಂದ ಎನ್ಒಸಿ ಪಡೆದುಕೊಂಡಿದ್ದಾರೆ. ಮತ್ತೊಬ್ಬಾಕೆ ಕಾಲೇಜಿನಿಂದ ವರ್ಗಾವಣೆ ಪತ್ರವನ್ನು ಕಾಲೇಜಿನಿಂದ ಪಡೆದಿದ್ದಾಳೆ.


