ಪಾಕಿಸ್ತಾನದ ‘ಐಎಸ್ಐ’ ಗೂಢಚರ ಸಂಸ್ಥೆಯಿಂದ ಬೆಂಗಳೂರಿಗೆ ದೂರವಾಣಿ ಕರೆ ಬಂದಿರುವ ಮಾಹಿತಿ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ರಮಣ ಗುಪ್ತಾ ತಿಳಿಸಿದ್ದಾರೆ.
ಪಾಕ್ನ ಐಎಸ್ಐ ಕಡೆಯಿಂದ ಒಂದು ದೂರವಾಣಿ ಕರೆ ಬಂದಿರುವ ಬಗ್ಗೆ ಮಿಲಿಟರಿ ಗುಪ್ತಚರ ವಿಭಾಗ ಮಾಹಿತಿ ನೀಡಿತ್ತು. ಈ ಮಾಹಿತಿ ಆಧರಿಸಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ ಕೇರಳ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪಾಕ್ನಿಂದ ಬಂದಿರುವ ನಿರ್ದಿಷ್ಟ ದೂರವಾಣಿ ಕರೆಯ ಮೂಲ ಪತ್ತೆಗೆ ಕ್ರಮ ವಹಿಸಲಾಗಿದೆ’ ಎಂದು ರಮಣ ಗುಪ್ತಾ ವಿವರಿಸಿದರು.
ಬಂಧಿತ ಆರೋಪಿ ಶರ್ಪುದ್ದೀನ್ ಬೆಂಗಳೂರು ನಗರದ ನಾಲ್ಕು ಕಡೆ ದೂರವಾಣಿ ಕರೆಗಳ ಪರಿವರ್ತಿತ ಬಾಕ್ಸ್ಗಳನ್ನು ಅಳವಡಿಸಿದ್ದ. ಅವುಗಳಿಗೆ ದಿನವೊಂದಕ್ಕೆ ವಿದೇಶಗಳಿಂದ ಲೆಕ್ಕವಿಲ್ಲದಷ್ಟು ಕರೆಗಳು ಬಂದಿವೆ. ಆ ಕರೆಗಳಲ್ಲಿ ಪಾಕ್ನಿಂದ ಬಂದ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನಿಂದ ಜಪ್ತಿ ಮಾಡಿಕೊಂಡಿರುವ 53 ಸಿಮ್ ಬಾಕ್ಸ್ಗಳ ಮೂಲಕ ವಿವಿಧ ಕಂಪನಿಗಳ 1,940 ಸಿಮ್ಗಳನ್ನು ಪರಿಶೀಲಿಸಲಾಗುತ್ತಿದೆ ಎಂದೂ ಹೇಳಿದರು.
ಆರೋಪಿ ಶರ್ಪುದ್ದೀನ್ ಕೇರಳದಿಂದ ಆಗಾಗ್ಗೆ ಬಂದು ಅಳವಡಿಸಿರುವ ಬಾಕ್ಸ್ಗಳು ಕಾರ್ಯ ನಿರ್ವಹಿಸುತ್ತಿವೆಯೇ ಇಲ್ಲವೇ ಎಂದು ಪರಿಶೀಲಿಸುತ್ತಿದ್ದ. ಆತನ ವಂಚನೆಯಿಂದ ಸರಕಾರಕ್ಕೆ ಹಾಗೂ ಟೆಲಿಕಾಂ ಕಂಪನಿಗಳಿಗೆ ಕಳೆದ ಎರಡು ವರ್ಷಗಳಿಂದ ಲಕ್ಷಾಂತರ ರೂ. ನಷ್ಟವುಂಟಾಗಿದೆ. ಆರೋಪಿ ಶರ್ಪುದ್ದೀನ್ ಇದೇ ಮಾದರಿಯ ವಂಚನೆ ಕೇಸ್ನಲ್ಲಿ ಈ ಹಿಂದೆ ಕೇರಳದಲ್ಲಿ ಬಂಧಿತನಾಗಿದ್ದ ಎಂಬ ಮಾಹಿತಿ ಸಿಕ್ಕಿದೆ.