ಪುತ್ತೂರು: ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಧ್ಯಮವರಿಗೆ ಹಲ್ಲೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರನ ದೂರಿನ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಕಾಲೇಜಿನ 25 ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 143, 323, 342, 506, 149ರಡಿ ಪ್ರಕರಣ ದಾಖಲು ಮಾಡಲಾಗಿದೆ. ಕಾಲೇಜಿನಲ್ಲಿ ಸತತ ಸೂಚನೆ ಬಳಿಕವೂ ಹಿಜಾಬ್ ಧರಿಸಿ ಬಂದಿದ್ದ ಆರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿತ್ತು. ಪ್ರಕರಣ ಸಂಬಂಧ ಪ್ರಾಂಶುಪಾಲರ ಹೇಳಿಕೆ ಪಡೆಯಲು ಬಂದಿದ್ದ ವೇಳೆ ವರದಿಗಾರನ ಮೇಲೆ ಹಲ್ಲೆ ಯತ್ನ ಮಾಡಿದ್ದ ವಿದ್ಯಾರ್ಥಿಗಳು, ಕ್ಯಾಮೆರಾ ಕಸಿದುಕೊಂಡು ವೀಡಿಯೋ ಡಿಲೀಟ್ ಮಾಡಿ ಗೂಂಡಾಗಿರಿಯ ವರ್ತನೆ ತೋರಿಸಿದ್ದರು.
ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಪೊಲೀಸ್ ದೂರು ದಾಖಲಿಸಲಾಗಿತ್ತು. ದೂರಿನನ್ವಯ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.