ಮಂಡ್ಯ: ಮಗುವೊಂದು ಕಾಯಿಲೆಯಿಂದ ಬಳಲುತ್ತಿದೆ ಎಂದರಿತ ಹೆತ್ತವರು ಮಗುವನ್ನು ನಗರದ ಫ್ಯಾಕ್ಟರಿ ಸರ್ಕಲ್ನಲ್ಲಿರುವ ಚರ್ಚ್ ನಲ್ಲಿ ಬಿಟ್ಟು ಹೋದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಕ್ಕಳಿಗೋಸ್ಕರ ಎಲ್ಲವನ್ನು ತ್ಯಾಗ ಮಾಡಿ ಮಗುವಿಗೆ ಉತ್ತಮ ಜೀವನ ನೀಡಬೇಕು ಎನ್ನುವ ಅದೆಷ್ಟೋ ತಂದೆ ತಾಯಿಗಳನ್ನು ನೋಡಿದ್ದೇವೆ. ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕೆಂದು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳಿಗೋಸ್ಕರ ಬದುಕುತ್ತಿರುವ ತಂದೆ ತಾಯಿಯನ್ನು ಕಾಣಬಹುದು. ಅಂತಹದರಲ್ಲಿ ಇಲ್ಲಿ ತಮ್ಮ ಮಗುವಿಗೆ ಕಾಯಿಲೆ ಇದೆ ಎಂದು ಆ ಮಗುವನ್ನು ಅನಾಥ ಮಾಡಿ ಪೋಷಕರು ಬಿಟ್ಟು ಹೋಗಿದ್ದಾರೆ. ಇತ್ತ ತಂದೆ ತಾಯಿಯ ಲಾಲನೆ ಪಾಲನೆ ಇಲ್ಲದೇ ಮಗು ಒದ್ದಾಡುತ್ತಿದೆ.
ಇಂದು ಬೆಳಗ್ಗೆ 6:30ರ ವೇಳೆಗೆ ನಗರದ ಫ್ಯಾಕ್ಟರಿ ಸರ್ಕಲ್ನಲ್ಲಿ ಇರುವ ಚಚ್ರ್ನಲ್ಲಿ ಪೋಷಕರು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದು, ಇದನ್ನು ಕಂಡ ಚರ್ಚ್ ಸಿಬ್ಬಂದಿ ಆ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ.
ಮಗುವನ್ನು ವಶಕ್ಕೆ ಪಡೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ಆರೋಗ್ಯ ಸ್ಥಿರವಾಗಿಲ್ಲದ ಕಾರಣ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಮಗುವಿಗೆ ಬುದ್ಧಿಮಾಂದ್ಯತೆಯೂ ಇದೆ ಎಂದು ವೈದ್ಯರು ಹೇಳಿದ್ದು, ಮಿಮ್ಸ್ ವೈದ್ಯರು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದಾರೆ..