ವಿಟ್ಲ: ಯಾರೇ ಆಗಲಿ ದೇಶದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದರೆ ಹಾಗು ಕಾನೂನು ಸುವ್ಯವಸ್ಥೆಗೆ ಸದಾ ಕಾಲ ಅಡ್ಡಿ ಪಡಿಸುತ್ತಿದ್ದರೆ ಅಂತಹ ಸಂಘಟನೆಗಳನ್ನು ಮುಲಾಜಿಲ್ಲದೆ ನಿಷೇಧ ಮಾಡೇವೆ. ಅದರ ಚಟುವಟಿಕೆಯಲ್ಲಿ ಒಳಗೊಳ್ಳುವ ವ್ಯಕ್ತಿಗಳ ಮೇಲೆ ಕಾನೂನು ಕಾಯ್ದೆ ಕ್ರಮವನ್ನೂ ತೆಗೆದುಕೊಳ್ಳತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಉಪ್ಪಿನಂಗಡಿಯ ಠಾಣೆ ಮುಂಭಾಗ ಇತ್ತೀಚೆಗೆ ನಡೆದ ಅಹಿತಕರ ಘಟನೆಯ ಬಗ್ಗೆ ವಿಟ್ಲದ ಖಾಸಗಿ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು ಹೇಳಿದರು.
ಎಸ್ ಪಿ ಕಛೇರಿ ಪುತ್ತೂರು ಬರಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಶಾಸಕರ ಬಹಳ ದೊಡ್ಡ ಆಗ್ರಹ ಇದೆ. ಸ್ಥಳಾಂತರಕ್ಕೆ ತುಂಬಾ ಆರ್ಥಿಕ ವ್ಯವಸ್ಥೆ ಬೇಕಾಗಿದೆ. ಕೇವಲ ಎಸ್ ಪಿ ಕಛೇರಿಯಲ್ಲ ಡಿಆರ್ ಸೇರಿ ಬೇರೆ ಬೇರೆ ವ್ಯವಸ್ಥೆಗಳೆಲ್ಲಾ ಬರಬೇಕಾಗಿದೆ. ಅದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು.
ಆನ್ ಲೈನ್ ಬಿಡ್ಡಿಂಗ್, ಸೈಬರ್ ಕ್ರೈಮ್ ಬಗ್ಗೆ ವಿಶೇಷವಾದ ಕ್ರಮವನ್ನು ತಂದಿದ್ದೇವೆ. ಹಿರಿಯ ವಕೀಲರನ್ನು ಕರೆಸಿ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡುವ ಜತೆಗೆ ಕಾಯ್ದೆಯನ್ನು ನಿಪ್ರಯೋಜಕ ಮಾಡಬೇಕೆಂಬ ಹೋರಾಟ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಒಳ್ಳೆಯ ಕಾರ್ಯಕ್ಕಾಗಿ ಕಾಯ್ದೆ ತರಲಾಗಿದೆ ಎಂಬುದನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.