ಮೈಸೂರು: ತಮ್ಮ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ ಮಹಿಳೆ ವಿರುದ್ಧ ನಟ ದರ್ಶನ್ ಮೈಸೂರಿನ ಎಸಿಪಿ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದೀಗ ಇದರ ವಿಷಯವಾಗಿ ದರ್ಶನ್ ಅವರು ಎಸಿಪಿ ಕಚೇರಿಗೆ ಹಾಜರಾಗಿದ್ದು, ಮಹಿಳೆ ಅರುಣ ಕುಮಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಲೋನ್ ವಿಚಾರವಾಗಿ ಈ ಅರುಣ ಕುಮಾರಿ ದರ್ಶನ್ ಬಳಿ ತೆರಳಿದ್ದರು. ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜತೆ ಈ ಮಹಿಳೆ ಬಂದಿದ್ದರು. ತಮ್ಮನ್ನು ತಾವು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಈಕೆ, ನಿಮ್ಮ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದಿದ್ದರು.
ಮೈಸೂರಿನಲ್ಲಿ ಇರುವ ಕೆಲ ದರ್ಶನ್ ಸ್ನೇಹಿತರು 25 ಕೋಟಿ ರೂ. ಲೋನ್ಗೆ ಅರ್ಜಿ ಹಾಕಿದ್ದಾರೆ. ನಿಮ್ಮ ಹೆಸರು ಬಳಸಿಕೊಂಡು ಲೋನ್ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ಬಂದಿರುವುದಾಗಿ ಹೇಳಿದ್ದರು. ನಂತರ ಅನುಮಾನಗೊಂಡ ದರ್ಶನ್ ಅವರು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಲೋನ್ಗೆ ಯಾರು ಅರ್ಜಿ ಹಾಕಿರಲಿಲ್ಲ ಎಂದು ತಿಳಿದುಬಂತು.
ಕೂಡಲೇ ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಅರುಣ ಕುಮಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಉಮಾಪತಿ ಹಾಗೂ ಶ್ರೀನಿವಾಸ್ ಗೌಡರನ್ನು ಕರೆಸಿರುವ ಪೊಲೀಸರು ನಕಲಿ ಮ್ಯಾನೇಜರ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಉಮಾಪತಿ ಹೇಳಿದ ಕಾರಣ ದರ್ಶನ ಬಳಿ ಬಂದು ಈ ರೀತಿ ಮಾಡಿದೆ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.
ಈ ರೀತಿ ಉಮಾಪತಿ ಯಾವ ಕಾರಣಕ್ಕೆ ಮಾಡಿದರು ಅನ್ನುವ ಬಗ್ಗೆ ಮಾಹಿತಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಇನ್ನಷ್ಟೇ ವಿಷಯ ಹೊರಬರಬೇಕಿದೆ. ಡಿಸಿಪಿ ಪ್ರದೀಪ್ ಗುಂಟಿ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿದ ದರ್ಶನ್, ನನ್ನ ಹೆಸರು ಬಳಕೆಯಾಗಿದೆ. ಆದ್ದರಿಂದಲೇ ಪೊಲೀಸ್ ಠಾಣೆಗೆ ಬಂದಿದ್ದೇನೆ. ಈ ವಿಷಯದಲ್ಲಿ ರೆಕ್ಕೆ ಪುಕ್ಕ ಬೆಳೆಸೋದು ಬೇಡ. ತಪ್ಪು ಮಾಡಿದ್ದು ಯಾರು ಅಂತ ಗೊತ್ತಾಗಲಿ. ನಂತರ ರೆಕ್ಕೆ ಪುಕ್ಕ ಅಲ್ಲ, ತಲೆಯನ್ನೇ ಕಡಿಯೋನು ಅಂತ ನಿಮಗೆಲ್ಲ ಗೊತ್ತು ಎಂದು ಕಿಡಿ ಕಾರಿದ್ದಾರೆ.


