ಮಂಗಳೂರು: ನಗರದ ಬೈಕಂಪಾಡಿ ಮೇಲ್ಸೇತುವೆ ಬಳಿ ಬಳಿ ಅಪಘಾತಗೊಂಡಿದ್ದವರೊಬ್ಬರನ್ನು ಉಪಚರಿಸುತ್ತಿದ್ದ ವೇಳೆ ಟ್ಯಾಂಕರೊಂದಕ್ಕೆ ಸಿಲುಕಿ ಎಳೆಯಲ್ಪಟ್ಟು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಸುಳ್ಯದ ದೊಡ್ಡತೋಟ ಬಳಿಯ ಮೇರ್ಕಜೆ ಪುರುಷೋತ್ತಮ ಎಂಬವರ ಪುತ್ರ ತೇಜಸ್(28 ) ಮೃತಪಟ್ಟ ಯುವಕ.
ಘಟನೆಯ ವಿವರ:
ಮಂಗಳೂರಿನಲ್ಲಿ ಇಲೆಕ್ಟ್ರೀಷಿಯನ್ ಆಗಿ ಉದ್ಯೋಗ ಮಾಡುತ್ತಿದ್ದ ಇವರು ನಿನ್ನೆ(ಜು.10) ಸಂಜೆಯ ವೇಳೆ ಕರ್ತವ್ಯ ಮುಗಿಸಿ ಮರಳುತ್ತಿದ್ದಾಗ ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾಗಿರುವುದನ್ನು ಕಂಡರು. ಅಪಘಾತಗೊಂಡಿದ್ದ ದ್ವಿಚಕ್ರ ವಾಹನ ಸವಾರರನ್ನು ಉಪಚರಿಸಿ, ಅಡ್ಡಬಿದ್ದಿದ್ದ ದ್ವಿಚಕ್ರವಾಹನವನ್ನು ಎತ್ತಿ ನಿಲ್ಲಿಸಿ, ಅದರಲ್ಲಿ ಕೂತು ದೂಡಿಕೊಂಡು ರಸ್ತೆಯ ಬದಿಗೆ ತರುತ್ತಿದ್ದರೆನ್ನಲಾಗಿದೆ.
ಈ ವೇಳೆಗೆ ಅದೇ ರಸ್ತೆಯಲ್ಲಿ ಬಂದ ಬುಲೆಟ್ ಟ್ಯಾಂಕರ್ ನ ಹಿಂದಿನ ಒಂದು ಬದಿಯ ಕಬ್ಬಣದ ಪೈಪ್ ತೇಜಸ್ ರವರ ಕಾಲಿನ ಮಧ್ಯೆ ಸಿಲುಕಿ ರಸ್ತೆಯಲ್ಲಿ ವಾಹನ ಸಮೇತ ಎಳೆಯಿತೆನ್ನಲಾಗಿದೆ. ಇದರಿಂದ ಸೊಂಟದ ಕೆಳಭಾಗ ಗಂಭೀರ ಗಾಯಗೊಂಡ ತೇಜಸ್ ರವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ತಂದು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ವಿಪರೀತ ರಕ್ತಸ್ರಾವದಿಂದ ಆರೋಗ್ಯದಲ್ಲಿ ಏರುಪೇರಾಗಿ ಜು.11 ರಂದು ಮುಂಜಾನೆ ಕೊನೆಯುಸಿರೆಳೆದರು.