ಧಾರವಾಡ : ಸ್ವಾಮೀಜಿಗಳು ಅಂದರೆ ಸಮಾಜ ಅಂಕು ಡೊಂಕುಗಳನ್ನು ತಿದ್ದಿ, ಭಕ್ತರನ್ನು ಸರಿ ದಾರಿಯಲ್ಲಿ ಮುನ್ನಡೆಸಬೇಕಾದವರು.ಆದರೆ ಭಕ್ತರಿಗೆ ಉತ್ತಮ ಸಂದೇಶ ನೀಡಬೇಕಾದ ಸ್ವಾಮೀಜಿಯೊಬ್ಬರು ‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’ ಹಾಡಿಗೆ ಹೆಜ್ಜೆ ಹಾಕಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಧಾರವಾಡ ತಾಲೂಕಿನ ನಿಗದಿ ಗ್ರಾಮದ ಹೊರವಲಯದಲ್ಲಿನ ಅಂಬಾವನ ಮಠದಲ್ಲಿ ಆಯೋಜಿಸಿದ್ದ ಕರೋಕೆ ಮ್ಯೂಸಿಕ್ ಸಂಜೆಯಲ್ಲಿ ಬಾಲಕಿಯೊಬ್ಬಳು ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡು ಹಾಡಿದ್ದಳು. ಆ ಬಾಲಕಿಯ ಹಾಡು ಕೇಳಿ ಖುಷಿಯಾದ ಧಾರವಾಡ ತಾಲೂಕಿನ ನಿಗದಿ ಬಳಿಯ ಅಂಬಾವನದ ಸ್ವಾಮೀಜಿ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ತಾವೊಬ್ಬ ಸ್ವಾಮೀಜಿ ಎಂಬುದನ್ನು ಕೂಡ ಮರೆತು ಹಾಡಿನ ನಶೆಯಲ್ಲಿ ತೇಲಾಡಿದ್ದಾರೆ.
ಈ ಸ್ವಾಮೀಜಿ ಮೈಸೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಲವು ವೇಷಗಳಿಂದ ಭಕ್ತರನ್ನು ಯಾಮಾರಿಸಿದ್ದಾರೆ ಎಂಬ ಆರೋಪಗಳು ಇವೆ. ಪ್ರವಚನ ಹಾಗೂ ಉತ್ತಮ ಸಂದೇಶಗಳನ್ನು ಭಕ್ತರಿಗೆ ನೀಡಬೇಕಿದ್ದ ಸ್ವಾಮೀಜಿಯೇ ಹೀಗೆ ಅಸಭ್ಯ ವರ್ತನೆ ತೋರಿದರೆ ಹೇಗೆ ಎಂಬ ಪ್ರಶ್ನೆ ಅಲ್ಲಿನ ಸಾರ್ವಜನಿಕರಲ್ಲಿ ಮೂಡಿದೆ.