ಬೆಳ್ತಂಗಡಿ: ದೇಶಾದ್ಯಂತ ಕೊರೋನಾ ಹಾವಳಿ ಹೆಚ್ಚುತಿದ್ದು ದೇಶವೇ ಲಾಕ್ ಡೌನ್ ಆಗಿದ್ದು ತಾಲೂಕಿನ ಜನತೆಯ ತುರ್ತು ಸೇವೆಗಾಗಿ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಕೊರೊನಾ ಬಗ್ಗೆ ತುರ್ತು ಕಾರ್ಯಪಡೆ ರಚಿಸಲಾಗಿದ್ದು ನಾಳೆಯಿಂದ ಈ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಅಗತ್ಯ ವಸ್ತುಗಳ ಅಲಭ್ಯತೆ ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಮಾರ್ಚ್ 25 ರಂದು ಸರಕಾರಿ ಪ್ರವಾಸಿ ಬಂಗಲೆಯಲ್ಲಿ ವೈದ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕರು ಬಳಿಕ ಮಾಧ್ಯಮ ಪ್ರತನಿಧಿಗಳಿಗೆ ಮಾಹಿತಿ ನೀಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಎಲ್ಲ ಪಿಡಿಒ ಗಳಿಗೆ, ತಹಶಿಲ್ದಾರರ ಮೂಲಕ ಎಲ್ಲ ವಿ.ಎ ಗಳಿಗೆ ಸೂಚನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಿನಿವಿಧಾನ ಸೌಧದ ಈ ಕೇಂದ್ರ ಕೊರೊನಾ ತುರ್ತು ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಈ ಕೇಂದ್ರದಲ್ಲಿ ಯಾರೆಲ್ಲ ಲಭ್ಯರಿರುತ್ತಾರೆ?
ಈ ಕೇಂದ್ರದದಲ್ಲಿ ಶಾಸಕರ ಕಚೇರಿಯ ಸಿಬ್ಬಂದಿ, ಕಂದಾಯ ಇಲಾಖೆ, ತಾಲೂಕು ಪಂಚಾಯತ್, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ತಲಾ ಒಬ್ಬೊಬ್ಬರು ಇರುವಂತೆ ಕ್ರಮ ಕೈಗೊಳ್ಳಲಾಗಿದೆ. ಸಹಾಯ ಯಾಚಿಸಿ ಈ ಕೇಂದ್ರಕ್ಕೆ ಕರೆಬಂದ ತಕ್ಷಣ ವಿವಿಧ ಇಲಾಖೆಗಳ ಮೂಲಕ ವ್ಯವಹರಿಸಿ ಅದನ್ನು ಪರಿಹರಿಸುವ ಕಾರ್ಯ ಮಾಡಲಿದ್ದಾರೆ ಎಂದರು.
ತುರ್ತು ಕರೆಗಾಗಿ ದೂರವಾಣಿ ಸಂಖ್ಯೆ: 08256-232047ಮತ್ತು 9901202207 ನಂಬರ್ (ಶಾಸಕರ ಕಚೇರಿ ನಂಬರ್) ಗೆ ತಾಲೂಕಿನ ಜನತೆ ಕರೆಮಾಡಬಹುದು.