ಮಂಗಳೂರು; NIA ಮತ್ತು ED ಅಧಿಕಾರಿಗಳೆಂದು ಹೇಳಿ ವ್ಯಕ್ತಿಯೊಬ್ಬರಿಂದ ಸೈಬರ್ ವಂಚಕರು 2.07 ಕೋಟಿ ರೂಪಾಯಿ ದೋಚಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಾರ್ಚ್ 31ರಂದು ಸಂತ್ರಸ್ತರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ‘ನ್ಯಾಷನಲ್ ಡೇಟಾ ಪ್ರೊಟೆಕ್ಷನ್ ಸೆಂಟರ್’ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. “ನಿಮ್ಮ ಗುರುತಿನ ಚೀಟಿ ಬಳಸಿ ಮುಂಬೈನಲ್ಲಿ ಸಿಮ್ ಕಾರ್ಡ್ ಖರೀದಿಸಲಾಗಿದೆ. ಇದರಿಂದ ಅಶ್ಲೀಲ ವೀಡಿಯೊ ರವಾನೆ ಹಾಗೂ ಡ್ರಗ್ಸ್ ದಂಧೆ ನಡೆಸಲಾಗುತ್ತಿದೆ. ನಿಮ್ಮ ಮೇಲೆ ಮುಂಬೈನ ಕೊಲಾಬಾ ಠಾಣೆಯಲ್ಲಿ 50ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿವೆ,” ಎಂದು ಬೆದರಿಸಿದ್ದಾನೆ.
ಬಳಿಕ ಎನ್ಐಎ ಅಧಿಕಾರಿ ಸಂದೀಪ್ ರಾವ್, ಎಡಿಜಿಪಿ ಮ್ಯಾಥ್ಯೂ ಮತ್ತು ಇಡಿ ಅಧಿಕಾರಿ ವಿಲಾಸ್ ರಾವ್ ಪಟೇಲ್ ಎಂಬ ಹೆಸರಿನಲ್ಲಿ ವಂಚಕರು ವಾಟ್ಸಾಪ್ ಕರೆ ಮಾಡಿ ಸಂತ್ರಸ್ತರನ್ನು ಭಯಭೀತರನ್ನಾಗಿಸಿದ್ದಾರೆ. “ನೀವು ದೊಡ್ಡ ಕ್ರಿಮಿನಲ್, ಭಯೋತ್ಪಾದಕ ಚಟುವಟಿಕೆಯಲ್ಲಿ ನಿಮ್ಮ ಹೆಸರಿದೆ,” ಎಂದು ಹೆದರಿಸಿ ಕೇಸ್ನಿಂದ ಮುಕ್ತಿ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದಕ್ಕೆ ಹೆದರಿದ ಸಂತ್ರಸ್ತರು ಏಪ್ರಿಲ್ 7ರಿಂದ 18ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹2,07,04,600 ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿದ್ದಾರೆ. ತಾವು ಮೋಸ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


