
ಉಡುಪಿ: ಖಾಸಗಿ ಬಸ್ ಸ್ಕೂಟರ್ ಗೆ ಡಿಕ್ಕಿಯಾಗಿ 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ಗ್ರಾಮದ ಸಾಯಿ ಸರ್ವಿಸ್ ಸ್ಟೇಷನ್ ಬಳಿ ಮಂಗಳವಾರ ಸಂಜೆ ನಡೆದಿದೆ. ಒಂಬತ್ತು ವರ್ಷದ ಬಾಲಕಿ ಸಾತ್ವಿ ಮೃತ ದುರ್ದೈವಿ. ಸ್ಕೂಟರ್ ಚಾಲನೆ ಮಾಡುತ್ತಿದ್ದ ತಂದೆ ನಿತ್ಯಾನಂದ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳವಾರ ಸಂಜೆ 5:35ರ ಸುಮಾರಿಗೆ ನಿತ್ಯಾನಂದ ಅವರು ಮಗಳು ಸಾತ್ವಿ ಜೊತೆ ಆಕ್ಟಿವಾ ಸ್ಕೂಟರ್ನಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸರ್ವಿಸ್ ರಸ್ತೆಯಿಂದ ಅತಿ ವೇಗವಾಗಿ ಬಂದ ಖಾಸಗಿ ಬಸ್ ಯಾವುದೇ ಸೂಚನೆ ನೀಡದೆ ಮುಖ್ಯ ಹೆದ್ದಾರಿಗೆ ನುಗ್ಗಿದೆ. ಬಸ್ ಚಾಲಕ ನ ನಿರ್ಲಕ್ಷ್ಯದಿಂದಾಗಿ ಬಸ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಬಸ್ ಡಿವೈಡರ್ ಮೇಲೆ ಹತ್ತಿ ನಿಂತಿದೆ. ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೂ ತಲೆಗೆ ತೀವ್ರ ಗಾಯವಾಗಿದ್ದ ಸಾತ್ವಿ ಉಡುಪಿಯ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಾಳು ನಿತ್ಯಾನಂದ ಶೆಟ್ಟಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


