ಸುಳ್ಯ: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಳ್ಯ ತಾಲೂಕಿನ ಅಮರ ಮುಡ್ನೂರು ಗ್ರಾಮದ ಕೂಟೇಲು ಎಂಬಲ್ಲಿ ನಡೆದಿದೆ. ಅಮರ ಮುಡ್ನೂರು ಗ್ರಾಮದ ಕೂಟೇಲು ನಿವಾಸಿ ಶಶಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದವರು.
ಶಶಿಕುಮಾರ್ ಇಲಿಪಾಷಾಣ ಸೇವಿಸಿರುವ ವಿಷಯ ತಿಳಿದ ತಕ್ಷಣ ಮನೆಯವರು ಆತಂಕಗೊಂಡು ಕೂಡಲೇ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕರೆ ಸ್ವೀಕರಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ 112 ಪೊಲೀಸ್ ಸಿಬ್ಬಂದಿ ಶಶಿಕುಮಾರ್ ಅವರನ್ನು ತಕ್ಷಣವೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಲಭ್ಯವಾದ ಕಾರಣ ಶಶಿಕುಮಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅವರು ವಿವಾಹಿತರಾಗಿದ್ದು, ಪತ್ನಿ ಮತ್ತು ಮಕ್ಕಳನ್ನು ಹೊಂದಿದ್ದಾರೆ. ಆದರೆ ಅವರು ಪತ್ನಿ, ಮಕ್ಕಳಿಂದ ದೂರವಾಗಿ ಬೇರೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇವರು ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


