ಉಡುಪಿ; ಖ್ಯಾತ ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ(84) ವಯೋಸಹಜ ಕಾಯಿಲೆಯಿಂದ ಜೂನ್ 21 ರಂದು ವಿಧಿವಶರಾಗಿದ್ದಾರೆ.
ಖ್ಯಾತ ಯಕ್ಷಗಾನ ಕಲಾವಿದ ಮುಖ್ಯಪ್ರಾಣ 50 ವರುಷಗಳಿಗೂ ಮಿಕ್ಕಿ ತೆಂಕು ಮತ್ತು ಬಡಗು ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕರಾವಳಿಯ ಬಹುತೇಕ ಯಕ್ಷಗಾನ ಮೇಳದಲ್ಲಿ ಅವರು ಬಣ್ಣ ಹಚ್ಚಿದ್ದರು. ಪೌರಾಣಿಕ ಪ್ರಸಂಗಗಳಲ್ಲಿ ಬಾವುಕ, ರಜಕ, ನಾರದ, ವಿಜಯ, ವೃದ್ಧಬ್ರಾಹ್ಮಣ, ಕಂದರ, ಮಂಥರೆ, ವಿದ್ಯುಜ್ಜಿಹ, ಶನಿ ಪೀಡಿತ ವಿಕ್ರಮ ಮುಂತಾದ ಪಾತ್ರಗಳು, ಕಾಲ್ಪನಿಕ ಪ್ರಸಂಗಗಳಲ್ಲಿ ಚೆಲುವೆ ಚಿತ್ರಾವತಿಯ ಅಡಗೂಲಜ್ಜಿ ಮತ್ತು ಮುರಳಿ ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನ ಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರ ಸೇನ ಹಾಗೂ ಕಲಿಕ್ರೋಧನದ ಮಡಿವಾಳ, ನಾಗಶ್ರೀಯ ಕೈರವನ ಪಾತ್ರಗಳ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಪಡೆದಿದ್ದವು.
ಯಕ್ಷಗಾನ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಉಡುಪಿ ಕಲಾರಂಗದ ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ, ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ, ಕೋಡಿಮನೆ ವಾಸುಭಟ್ಟ ಪುರಸ್ಕಾರ ಸೇರಿದಂತೆ ನೂರಾರು ಸಂಮಾನ, ಗೌರವಗಳು ಸಂದಿದ್ದವು.