ಬೈಂದೂರು ತಾಲೂಕಿನ ನಾಡ ಗ್ರಾಮದ ಬಡಾಕೆರೆ ಸೌಪರ್ಣಿಕಾ ನದಿ ದಡದ ಮೇಲೆ ನಿಂತು ಬಲೆ ಬೀಸಿ ಮೀನು ಹಿಡಿಯುವ ಸಮಯದಲ್ಲಿ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ಮಂಜು (57) ಎಂದು ತಿಳಿದು ಬಂದಿದೆ.
ಘಟನೆ ವಿವರ: ಮಂಜು ಅವರು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ಎಂದಿನಂತೆ ಸೋಮವಾರ ಮಧ್ಯಾಹ್ನ 3.30 ಸುಮಾರಿಗೆ ನದಿಯಲ್ಲಿ ಮೀನು ಹಿಡಿಯಲೆಂದು ಮನೆಯಿಂದ ತೆರಳಿದ್ದರು. ಸೌಪರ್ಣಿಕಾ ನದಿ ದಡದ ಮೇಲೆ ನಿಂತು ಬಲೆ ಬೀಸಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದರು.
ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ, ನೀರಿನ ಒಳ ಹರಿವು ಹೆಚ್ಚಾಗಿರುವುದರಿಂದ ಸಮಸ್ಯೆಯಾಗಿತ್ತು. ಮಂಗಳವಾರ ಸೌಪರ್ಣಿಕಾ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಬೈಂದೂರು ಠಾಣಾಧಿಕಾರಿ ಡಾ.ಹರ್ಷ ಐಪಿಎಸ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.