ಬೆಳ್ತಂಗಡಿ: ಕಾರ್ಕಳದ ಕುಕ್ಕುಂದೂರಿನಲ್ಲಿ ಅಕ್ಟೋಬರ್ 15 ರಂದು ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ, ವಸಂತ ಬಂಗೇರ ಅವರನ್ನು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಸಂತ ಬಂಗೇರರ ಅಭಿಮಾನಿ ಬಳಗದಿಂದ ಉಪ್ಪಿನಂಗಡಿ ಠಾಣೆಯಲ್ಲಿ ಬುಧವಾರದಂದು ಮನವಿ ಪತ್ರವನ್ನು ನೀಡಲಾಯಿತು.

ರಾಕೇಶ್ ಶೆಟ್ಟಿ ಸಮಾವೇಶದ ಧಿಕ್ಸೂಚಿ ಭಾಷಣದಲ್ಲಿ ವಸಂತ ಬಂಗೇರರ ವಿರುದ್ಧ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ಡಿದ್ದು, ಬೆಳ್ತಂಗಡಿ ಮತ್ತು ಉಜಿರೆ ನಿವಾಸಿಗಳನ್ನು ಪಾಪಿಗಳು ಎಂದು ನಿಂದಿಸಿರುತ್ತಾನೆ. ಅಷ್ಟೇಅಲ್ಲದೆ ತನ್ನ ಮಾತುಗಳಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾನೆ. ಈತನ ದ್ವೇಷ ಪೂರಿತ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಿಂದಾಗಿ ನಮಗೆ ತೀವ್ರ ಅಘಾತವಾಗಿರುತ್ತದೆ. ಬೆಳ್ತಂಗಡಿ ಮಾಜಿ ಶಾಸಕರಾದ ಕೆ. ವಸಂತ ಬಂಗೇರರನ್ನು ಈ ರೀತಿಯಾಗಿ ನಿಂದಿಸಿ, ಅವಮಾನಿಸಿರುವುದು ಅಕ್ಷಮ್ಯ ಅಪರಾಧ ಎಂದು ಮನವಿ ಪತ್ರದಲ್ಲಿ ನಮೂದಿಸಲಾಗಿದೆ.

ಈ ಬಗ್ಗೆ ದೂರಿನಲ್ಲಿ ಆರೋಪಿಯ ವಿರುದ್ಧ 32 ಜನ ಸಹಿ ಹಾಕಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಯನ್ನು ಬಂಧಿಸುವಂತೆ ಪತ್ರದಲ್ಲಿ ವಿನಂತಿಸಲಾಯಿತು.
