ಬೆಳ್ತಂಗಡಿ : ದೇಶ ವಿದೇಶಗಳಲ್ಲಿ ಅಸಾಧ್ಯವಾದ ಬೆಟ್ಟ, ಕಟ್ಟಡಗಳನ್ನು ಏರುವ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಚಿತ್ರದುರ್ಗ ಮೂಲದ ಪರ್ವತಾರೋಹಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲನ್ನು ಏರಲು ಸಿದ್ಧರಾಗಿದ್ದು, ಇದಕ್ಕೆ ಪೂರ್ವತಯಾರಿಗಾಗಿ ಫೆ.10ರಂದು ಕೋತಿರಾಜ್ ಮತ್ತು ತಂಡದವರು ಗಡಾಯಿಕಲ್ಲಿಗೆ ಆಗಮಿಸಿದ್ದು, ಹತ್ತುವಾಗ ಸುರಕ್ಷತೆಗಾಗಿ ರೋಪ್ ಗಳನ್ನು ಸಿದ್ದಪಡಿಸಿಕೊಂಡು ಕೆಳಗೆ ಹಾಕಿ ಮೇಲಿನಿಂದ ಕೆಳಗೆ ಇಳಿಯುವ ಮೂಲಕ ಅಲ್ಲಿನ ವಸ್ತುಸ್ಥಿತಿಯನ್ನು ಅಧ್ಯಯನ ಫೆ.12ರಂದು ಬೆಳಗ್ಗೆ 9 ಗಂಟೆಗೆ ಗಡಾಯಿಕಲ್ಲನ್ನು ಏರುವ ಜಾಗವನ್ನು ಗೊತ್ತುಪಡಿಸಿದ್ದಾರೆ.
1700 ಅಡಿ ಎತ್ತರವನ್ನು ಹೊಂದಿರುವ ಹೆಬ್ಬಂಡೆಯಾದ ಈ ಗಡಾಯಿಕಲ್ಲನ್ನು ಏರುವ ಸಾಹಸವನ್ನು ಇದೇ ಮೊದಲ ಬಾರಿಗೆ ಕೋತಿರಾಜ್ ಅವರು ಮಾಡುತ್ತಿದ್ದು, ಸಾರ್ವಜನಿಕರಲ್ಲಿ ತೀರ್ವ ಕುತೂಹಲವನ್ನು ಕೆರಳಿಸಿದೆ. ಗಡಾಯಿಕಲ್ಲು ಹತ್ತಲು ಲಾಯಿಲ ಗ್ರಾಮದ ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪಕ್ಕದ ಗುಡ್ಡದ ಮೂಲಕ ಸುಮಾರು ಎರಡು ಕಿ.ಮೀ ನಡೆದುಕೊಂಡು ಹೋಗಿ ನಂತರ ಗಡಾಯಿಕಲ್ಲು ಬುಡದ ಮೂಲಕ ಮೇಲೆ ಹತ್ತಲು ಜಾಗ ಗುರುತಿಸಲಾಗಿದ್ದು. ಈ ಬಗ್ಗೆ ಮಾತನಾಡಿದ ಕೋತಿರಾಜ್ ಅವರ ಸ್ನೇಹಿತ ಬಸವರಾಜ್ ಅವರು ಫೆ.12ರ ಭಾನುವಾರದಂದು ಎಲ್ಲರೂ ಬಂದು ಈ ಸಾಹಸವನ್ನು ನೋಡಿ ಪ್ರೋತ್ಸಾಹಿಸುವಂತೆ ಕೇಳಿಕೊಂಡಿದ್ದಾರೆ.
ಈಗಾಗಲೆ ಬೆಳ್ತಂಗಡಿ ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದಿರುವ ಈ ತಂಡವು ಶಾಸಕ ಹರೀಶ್ ಪೂಂಜ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಶಾಸಕರು ಕೋತಿರಾಜ್ ಅವರ ತಂಡಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ.ಈ ತಂಡದಲ್ಲಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ಬಸವರಾಜ್, ಲಿಂಗರಾಜ್, ರಾಜು, ಮದನ್, ಅಭಿ, ನವೀನ್, ಪವನ್ ಮತ್ತು ಪವನ್ ಜೋಶ್ ಇದ್ದು, ಇವರು ಮೂರು ದಿನಗಳ ಕಾಲ ಧರ್ಮಸ್ಥಳದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.