ಬಂಟ್ವಾಳ: ರಸ್ತೆ ಕಾಮಗಾರಿಯೊಂದು ಮುಗಿಯುವ ಮುನ್ನವೇ ಅದರ ವಿಡಿಯೋ ಮಾಡಿ ಅಸಮರ್ಪಕ ಕಾಮಗಾರಿ ಎಂದು ವಿಡಿಯೋ ವೈರಲ್ ಮಾಡಿದ ವ್ಯಕ್ತಿಯ ವಿರುದ್ಧ ಎಂಜಿನಿಯರ್ ದೂರು ನೀಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳದ ಸರಪಾಡಿ ಗ್ರಾಮದ ಪೆರಿಯಪಾದೆ-ಅರಸೊಳಿಗೆ ರಸ್ತೆಯ ಡಾಮರು ಅಗೆದು ವೀಡಿಯೋ ಮಾಡಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಪದ್ಮನಾಭ ಸಾವಂತ್ ಎಂಬವರ ವಿರುದ್ಧ ಬಂಟ್ವಾಳ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್ ದೂರು ನೀಡಿದ್ದಾರೆ.
ಅರಸೊಳಿಗೆ ರಸ್ತೆಯ ಡಾಮರು ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಹೊಸ ಡಾಮರನ್ನು ಅಗೆದು ವೀಡಿಯೋ ಮಾಡಿದ್ದಾರೆ. ಕಾಮಗಾರಿಯ ವೇಳೆ ಆ ವ್ಯಕ್ತಿ ಡಾಮರನ್ನು ಎಬ್ಬಿಸುವ ಜತೆಗೆ ಶಾಸಕರ ಕುರಿತು ಕೆಟ್ಟ ಶಬ್ದಗಳನ್ನು ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಕಾಮಗಾರಿ ಗುಣಮಟ್ಟದ ತನಿಖೆಗಾಗಿ ಶಾಸಕರು ಡಿಸಿಗೆ ಸೂಚಿಸಿದ್ದು, ಅದರಂತೆ ಜಿ.ಪಂ. ಎಂಜಿನಿಯರಿಂಗ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿದ್ದ ಎರಡು ತಂಡಗಳ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ