ಬೆಂಗಳೂರು: ಉಡುಪಿ ಮೂಲದ ಯುವಕರ ಬೇಕರಿಯೊಂದಕ್ಕೆ ನುಗ್ಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ಠಾಣೆ ಪೊಲೀಸರು ಮೂವರನ್ನು ಪುಡಿ ರೌಡಿಗಳನ್ನು ಬಂಧಿಸಿದ್ದಾರೆ.
ಅಶ್ವಥ್ನಗರದ ಕಾರ್ತಿಕ್ (20), ಸಲ್ಮಾನ್ (23) ಹಾಗೂ ಮಾರತ್ತಹಳ್ಳಿಯ ಕಾರ್ತಿಕ್ (23) ಬಂಧಿತರು. ಉಡುಪಿಯ ಬೈಂದೂರಿನ ಯುವಕರಾದ ನವೀನ್ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ ಎಂಬವರು ಹಲ್ಲೆಗೊಳಗಾದವರು.ಘಟನೆಯಲ್ಲಿ ಪ್ರಜ್ವಲ್ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀನ್ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹಲ್ಲೆ ಸಂತ್ರಸ್ತರ ಹೇಳಿಕೆ ಆಧರಿಸಿ ಮೂವರನ್ನು ಬಂಧಿಸಲಾಗಿದ್ದು, ಮತ್ತಷ್ಟು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.ನವೀನ್ ಹಾಗೂ ಪ್ರಜ್ವಲ್ ಸೇರಿ ಕೆಲ ತಿಂಗಳ ಹಿಂದೆ ಪಾಲುದಾರಿಕೆಯಲ್ಲಿ ಬ್ರಹ್ಮಲಿಂಗೇಶ್ವರ ಹೆಸರಿನಲ್ಲಿ ಎಚ್ಎಲ್ ಕುಂದನಹಳ್ಳಿ ಗೇಟ್ ಬಳಿ ಬೇಕರಿ ತೆರೆದಿದ್ದರು.ವ್ಯಾಪಾರದಿಂದ ಬಂದ ಹಣದಲ್ಲಿ ಬದುಕು ಕಟ್ಟಿಕೊಂಡಿದ್ದರು.ಮೊನ್ನೆ ಸಿಗರೇಟ್ ಸೇದಲು ಬಂದ ಪುಡಿ ರೌಡಿಗಳು ಸಿಗರೇಟಿನ ಹಣ ಕೇಳಿದ್ದಕ್ಕೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


