ಇದು ದುಬಾರಿ ದುನಿಯಾ.ಎಲ್ಲದರ ಬೆಲೆ ಗಗನಕ್ಕೇರಿದೆ. ಅದ್ರಲ್ಲಿ ನಿಂಬೆ ಹಣ್ಣು ಕೂಡಾ ಸೇರಿದೆ. ಉತ್ತರ ಭಾರತದಲ್ಲಿ ನಿಂಬೆ ಬೆಲೆ ಕೆಜಿಗೆ ೩೫೦ ರು.ಗೆ ಏರಿ ಇತ್ತೀಚೆಗೆ ನಿಂಬೆಹಣ್ಣಿನ ದರೋಡೆ ನಡೆದಿದ್ದುಂಟು. ಈಗ ಉತ್ತರ ಭಾರತ ಮಾತ್ರವಲ್ಲ, ರಾಜ್ಯದಲ್ಲಿ ಕೂಡ ನಿಂಬೆಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಉತ್ತಮ ಗಾತ್ರದ ನಿಂಬೆಹಣ್ಣಿನ ದರ ಪ್ರತಿ ಕೆಜಿಗೆ ೩೦೦ ರು. ತಲುಪಿದೆ.
ನಿಂಬೆ ಹಣ್ಣಿನ ಬೆಲೆ ಅದ್ಯಾವ ಪರಿ ಹೆಚ್ಚಾಗಿದೆಯೆಂದರೆ ಬೇಸಿಗೆ ಆದ್ರೂ ನಿಂಬೆಯ ಜ್ಯೂಸ್ ಮಾತ್ರ ಕುಡಿಯೋದು ಬೇಡ ಅಂತಿದ್ದಾರೆ ಜನ್ರು. ನಿಂಬೆ ಹಾಕಿ ಮಾಡುವ ರೆಸಿಪಿಗಳನ್ನಂತೂ ಸ್ಪಲ್ಪ ದಿನಕ್ಕೆ ಮರೆತೇ ಬಿಡ್ಬೇಕೇನೂ ಅಂತಿದ್ದಾರೆ ಹಲವ್ರು. ಬೆಲೆ ಏರಿಕೆ ಗ್ರಾಹಕರನ್ನ ಮತ್ತು ಮಾಂಸಾಹಾರಿ ಹೋಟೆಲ್ ಮಾಲೀಕರನ್ನು ಕಂಗಾಲು ಮಾಡಿದೆ. ನಿಂಬೆ ಹಣ್ಣಿನ ಬೆಲೆ ಪ್ರತಿ ಕೆಜಿಗೆ ೩೦೦ ರೂ. ನಷ್ಟು ಏರಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಹಿನ್ನಲೆಯಲ್ಲಿ ಬೆಲೆ ಹೆಚ್ಚಳವಾಗಿದೆ ಎನ್ನಲಾಗಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಕೋಲಾರಕ್ಕೆ ನಿಂಬೆ ಹಣ್ಣು ಪೂರೈಕೆಯಾಗುತ್ತಿದೆ. ಜೊತೆಗೆ ಸ್ಥಳೀಯವಾಗಿ ನಿಂಬೆಹಣ್ಣು ಬೆಳೆಯಲಾಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ೭ ರಿಂದ ೧೦ ರುಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ.
ರಾಜ್ಯಾದ್ಯಾಂತ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ನಿಂಬೆ ಹಣ್ಣಿನ ಫಸಲಿನಲ್ಲಿ ಶೇಕಡ ೪೦ ರಷ್ಟು ಕುಸಿತವಾಗಿದೆ. ಇದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣವೆನ್ನಲಾಗಿದೆ. ರಾಜ್ಯದಲ್ಲಿ ಸುಮಾರು ೨೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯುವ ರೈತರಿದ್ದಾರೆ. ಆದರೆ, ಹೂವು ಬಿಡುವ ತಿಂಗಳಾದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದಿದೆ. ಇದೇ ಕಾರಣದಿಂದ ನಿಂಬೆ ಹೂವು ಶೇಕಡ ೫೦ ರಷು ಉದುರಿ ಹೋಗಿದೆ. ಅಲ್ಲದೆ, ೧೦೦ ಹಣ್ಣು ಸಿಗುವ ಮರದಲ್ಲಿ ಕೇವಲ ೫೦ ರಿಂದ ೬೦ ಹಣ್ಣು ಮಾತ್ರ ಸಿಗುತ್ತಿದೆ. ಇದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ ಅಂತಾರೆ ಬೆಳೆಗಾರರು.
ಒಟ್ನಲ್ಲಿ, ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣಿನ ಬೆಲೆ ಏರಿಕೆಯಾಗುತ್ತೆ. ಆದ್ರೆ, ಈ ಬಾರಿ ಮಳೆಗಾಲದಲ್ಲಿ ಅತಿವೃಷ್ಠಿ, ಬೆಳೆ ನಾಶದಿಂದ ಬೇಸಿಗೆಯಲ್ಲಿ ದುಪ್ಪಟ್ಟು ಬೆಲೆ ಏರಿಕೆಯಾಗಿದೆ. ನಿಂಬೆ ಹಣ್ಣಿನ ಬಳಕೆ ಕೇವಲ ಅಡುಗೆ ಮನೆ ಅಥ್ವಾ ಪಾನೀಯಕ್ಕೆ ಸೀಮಿತವಾಗಿಲ್ಲ. ಈ ಹಣ್ಣಿನಲ್ಲಿ ಜೀರ್ಣಶಕ್ತಿ ಇರುವುದರಿಂದ ಹೆಚ್ಚಿನ ಬೆಲೆ ತೆತ್ತು ಮಾರುಕಟ್ಟೆಯಲ್ಲಿ ನಿಂಬೆ ಖರೀದಿಸುವಂತಾಗಿದೆ.