ತೆಲಂಗಾಣ: ಶಾಲೆಯಲ್ಲಿ ಟೀಚರ್ ತನಗೆ ಹೊಡೆದರು ಎಂದು ಬಾಲಕನೊಬ್ಬ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇಲ್ಲಿನ ಮೆಹಬೂಬ್ಬಾದ್ ನಗರದ 2ನೇ ತರಗತಿ ಬಾಲಕ ಟೀಚರ್ ಶಾಲೆಯಲ್ಲಿ ನನಗೆ ಹೊಡೆದಿದ್ದಾರೆ. ಅವರಿಗೆ ಶಿಕ್ಷೆ ಕೊಡಿ ಎಂದು ಠಾಣೆಗೆ ಬಂದು ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ರಮಾದೇವಿ ಬಳಿ ಹೇಳಿದ್ದಾನೆ.
ಇದರಿಂದ ಅಚ್ಚರಿಗೆ ಒಳಗಾದ ಪೊಲೀಸ್ ಬಾಲಕನ ಕೂರಿಸಿಕೊಂಡು ಆತನ ಬಳಿ ವಿಚಾರಿಸಿದ್ದಾರೆ. ಶಿಕ್ಷಕಿ ನಿನಗೆ ಯಾಕೆ ಹೊಡೆದಿದ್ದಾರೆ. ನಿನ್ನ ಬಿಟ್ಟು ಇನ್ನಾರಿಗೆಲ್ಲಾ ಹೊಡೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಬಾಲಕ, ನಾನು ಸರಿಯಾಗಿ ಓದದಕ್ಕೆ ಹೊಡೆದಿದ್ದಾರೆ. ನನಗೊಬ್ಬನಿಗೆ ಹೊಡೆದಿದ್ದಾರೆ ಎಂದಿದ್ದಾನೆ. ಜೊತೆಗೆ ಈಗ ಶಾಲೆಗೆ ಹೋಗು ನಾಳೆ ವಿಚಾರಿಸುತ್ತೇವೆ ಎಂದು ಪೊಲೀಸರು ಕೇಳಿಕೊಂಡರು ಒಪ್ಪದ ಬಾಲಕ ಈಗಲೇ ಶಾಲೆಗೆ ಬರುವಂತೆ ಪೀಡಿಸಿದ್ದಾನೆ. ಹೀಗಾಗಿ ಶಾಲೆಗೆ ಆಗಮಿಸಿದ ಪೊಲೀಸರು ಈ ಬಗ್ಗ ವಿಚಾರಿಸಿದ್ದಾರೆ. ಅಲ್ಲದೆ ಹಾಗೆಲ್ಲಾ ಮಾಡಬಾರದು ಎಂದು ಬಾಲಕನಿಗೆ ಬುದ್ಧಿಮಾತು ಹೇಳಿದ್ದಾರೆ. ಇದಕ್ಕೆ ಒಪ್ಪದ ಬಾಲಕ ಶಿಕ್ಷಕಿಯದ್ದು ತಪ್ಪು ಎಂದು ವಾದಕ್ಕೆ ಮುಂದಾಗಿದ್ದಾನೆ. ಹೀಗಾಗಿ ಬಾಲಕನಿಗೆ ಕೌನ್ಸಿಲಿಂಗ್ ನೀಡಲು ನಿರ್ಧರಿಸಲಾಗಿದೆ.