ಬೆಂಗಳೂರು: ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರ್ಥಿಕ ಪ್ಯಾಕೇಜ್ ವಿಸ್ತರಿಸುವ ಸಾಧ್ಯತೆ ಇದೆ. ಮೊದಲ ಪ್ಯಾಕೇಜ್ ನಲ್ಲಿ ಹೊರಗುಳಿದ ಶ್ರಮಿಕ ವರ್ಗದವರಿಗೆ ಎರಡನೇ ಪ್ಯಾಕೇಜಿನಲ್ಲಿ ನೆರವು ನೀಡಲಾಗುವುದು. 8 ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ನೀಡಲಿದ್ದು ಇನ್ನೂ ಎರಡು ಅಥವಾ ಮೂರು ವರ್ಗದವರನ್ನು ಸೇರ್ಪಡೆ ಮಾಡಲಾಗುವುದು. 5 ಸಾವಿರ ರೂಪಾಯಿ ಬದಲು ಮೊತ್ತದಲ್ಲಿ ಕೊಂಚ ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅರ್ಚಕರು, ನೊಂದಾಯಿತ ಅಡುಗೆ ಕಾರ್ಮಿಕರು, ಅಕ್ಕಸಾಲಿಗರು, ಕಮ್ಮಾರರು, ಫೋಟೋಗ್ರಾಫರ್ ಗಳು, ಪ್ರವಾಸಿ ಗೈಡ್ ಗಳು, ಮಂಗಳಮುಖಿಯರು, ಹಮಾಲಿಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಮರಗೆಲಸ ಮಾಡುವವರು, ಬೀದಿಬದಿ ವ್ಯಾಪಾರಿಗಳಿಗೆ ಕೂಡ ನೆರವು ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.
1610 ಕೋಟಿ ರೂಪಾಯಿ ಮೊತ್ತದ ಮೊದಲ ಹಂತದ ವಿಶೇಷ ಪ್ಯಾಕೇಜ್ ನೀಡಿದ್ದ ಸಿಎಂ ಯಡಿಯೂರಪ್ಪ ಇನ್ನೆರಡು ದಿನದಲ್ಲಿ ಸುಮಾರು 500ರಿಂದ 600 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಬಹುತೇಕ ಇಂದು ಅಥವಾ ನಾಳೆ ಎರಡನೇ ಪ್ಯಾಕೇಜ್ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.