ಹೊಸದಿಲ್ಲಿ: ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ, ಹೊಸದಿಲ್ಲಿ ಸಂಸದೆ ಮೀನಾಕ್ಷಿ ಲೇಖಿ ಸೇರಿದಂತೆ 17 ಮಂದಿ ಸಂಸದರಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ ಎಂದು ವರದಿಯಾಗಿದೆ.
ಇಂದು ಮುಂಗಾರು ಅಧಿವೇಶನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರು ಸೇರಿದಂತೆ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಂತ್ಕುಮಾರ್ ಹೆಗಡೆ ಸೇರಿದಂತೆ 17 ಮಂದಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಸೋಮವಾರದಿಂದ ಸಂಸತ್ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ಅನಂತ್ ಕುಮಾರ್ ಹೆಗಡೆ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿಗೆ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಆದರೆ ಅನಂತಕುಮಾರ್ ಗೆ ಸೋಂಕಿನ ಯಾವುದೇ ಲಕ್ಷಣವಿರಲಿಲ್ಲ. ಹೀಗಾಗಿ ಅವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್ ಗೊಳಪಟ್ಟಿದ್ದಾರೆ. ಶಿರಸಿಯ ಅವರ ನಿವಾಸಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಕುಟುಂಬದವರ ಗಂಟಲುದ್ರವ ಪರೀಕ್ಷಿಸಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಸಂಸದರ ಆಪ್ತರೋರ್ವರು ತಿಳಿಸಿದ್ದಾರೆ.